ಹರಿದ್ವಾರ (ಉತ್ತರ ಪ್ರದೇಶ): ಅಖಂಡ ಭಾರತದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರ ಕನಸಾದ ‘ಅಖಂಡ ಭಾರತ’ ಜನಸಾಮಾನ್ಯರೂ ಸ್ವಲ್ಪ ಪ್ರಯತ್ನ ಮಾಡಿದರೆ 10-15 ವರ್ಷಗಳಲ್ಲಿ ನನಸಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹರಿದ್ವಾರದಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ದೇಶವು ಯಾವ ವೇಗದಲ್ಲಿ ಉನ್ನತಿಯ ಹಾದಿಯಲ್ಲಿ ಸಾಗುತ್ತಿದೆಯೋ, ಅಖಂಡ ಭಾರತವಾಗಲು 20-25 ವರ್ಷಗಳು ಬೇಕು ಎಂದು ಹೇಳಿದ ಅವರುಇದು ಇನ್ನೂ ವೇಗ ಪಡೆದರೆ ಇದರ ಅರ್ಧ ಸಮಯದಲ್ಲಿ ಕನಸು ನನಸಾಗಬಹುದು ಎಂದರು.
ತತ್ವಜ್ಞಾನಿ ಶ್ರೀ ಅರವಿಂದರ ಅವರ ಮಾತುಗಳನ್ನೂ ಈ ವೇಳೆ ಸ್ಮರಿಸಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಶ್ರೀ ಶ್ರೀ ಅರವಿಂದರ ಅವರ ಪ್ರಕಾರ ವಾಸುದೇವ (ಭಗವಾನ್ ಕೃಷ್ಣ) ನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಅರವಿಂದರ ಮಾತುಗಳ ಮೇಲೆ ನನಗೆ ಅಪಾರ ನಂಬಿಕೆ ಇದೆ. ನಂಬಿಕೆಯ ಆಧಾರದ ಮೇಲೆ ನಾನೂ ಕೂಡಾ ಲೆಕ್ಕಾಚಾರ ಹಾಕಿದ್ದೇನೆ, ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಮಾಡಿರುವ ಅಂದಾಜು ಅಲ್ಲ ಎಂದು ಭಾಗವತ್ ತಿಳಿಸಿದರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿದಿರುವ ಸ್ವಾಮಿ ರವೀಂದ್ರ ಪುರಿ ಅವರ ಹೇಳಿಕೆ ಮೇಲೂ ತಮಗೆ ನಂಬಿಕೆ ಇರೋದಾಗಿ ತಿಳಿಸಿರುವ ಮೋಹನ್ ಭಾಗವತ್, ಅವರು ಹೇಳಿದಂತೆಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಅಖಿಲ ಭಾರತೀಯ ಅಖಾರಾ ಪರಿಷತ್ನ ಅಧ್ಯಕ್ಷ ಸ್ವಾಮಿ ರವೀಂದ್ರ ಪುರಿ ಶ್ರೀಗಳು, ಮುಂದಿನ 20-25 ವರ್ಷಗಳಲ್ಲಿ ನಾವು ‘ಅಖಂಡ ಭಾರತ’ದ ಕನಸನ್ನು ನನಸು ಮಾಡಿಕೊಳ್ಳಲಿದ್ದೇವೆ ಎಂದು ಜ್ಯೋತಿಷ್ಯ ಶಾಸ್ತ್ರದ ಬಲದಿಂದ ಭವಿಷ್ಯ ಹೇಳುತ್ತಿದ್ದೇನೆ ಎಂದು ತಿಳಿಸಿದ್ದರು. ಈಗ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಕೂಡ ಇದನ್ನೇ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ