ಸಿಎಂ ಬೊಮ್ಮಾಯಿ ನಾಳೆ ದೆಹಲಿಗೆ

ಬೆಂಗಳೂರು: ನವದೆಹಲಿಯಲ್ಲಿ ಎಲ್ಲ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ಶನಿವಾರ ನಡೆಯಲಿದ್ದು, ನಾಳೆ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ತಮಗೂ ಕೂಡ ಆಹ್ವಾನ ಬಂದಿರುವುದರಿಂದ ಈ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ತಿಳಿಸಿದರು.

ದೆಹಲಿಗೆ ತೆರಳಿದ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕ್ಷಣದವರೆಗೂ ನಾನು ವರಿಷ್ಠರನ್ನು ಭೇಟಿಯಾಗುವ ಸಮಯ ಅವಕಾಶ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ದೆಹಲಿಗೆ ತೆರಳಿದ ನಂತರ ಅಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ನಂತರ ತೀರ್ಮಾನಿಸುತ್ತೇನೆ. ವರಿಷ್ಠರನ್ನು ಭೇಟಿಯಾಗುವ ಬಗ್ಗೆ ಸಮಯ ನಿಗದಿಯಾಗಿಲ್ಲ. ಅಲ್ಲಿಗೆ ಹೋದ ಮೇಲೆ ಏನಾಗುತ್ತದೆಯೋ ನೋಡೋಣ ಎಂದಷ್ಟೆ ಹೇಳಿದರು.
ಎಡಿಜಿಪಿ ಅಮೃತ್ ಪಾಲ್ ಅವರನ್ನು ವರ್ಗಾವಣೆ ಮಾಡಿರುವುದು ಎಸ್‍ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಉತ್ತರಿಸಿದ ಬೊಮ್ಮಾಯಿ, ಅಧಿಕಾರಿಗಳ ವರ್ಗಾವಣೆ ಒಂದು ಸಹಜ ಪ್ರಕ್ರಿಯೆ. ಅನೇಕ ಎಡಿಜಿಪಿಗಳ ವರ್ಗಾವಣೆಯಾಗಿದೆ. ಅದರಂತೆ ಇದು ಕೂಡ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement