ಪುಣೆ: ನೆರೆ ರಾಜ್ಯ ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟವನ್ನು ತಾವು ಬೆಂಬಲಿಸುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಪುಣೆ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 1960 ರ ಈ ದಿನದಂದು ಮಹಾರಾಷ್ಟ್ರ ರಚನೆಯಾಗಿ 62 ವರ್ಷ ಪೂರೈಸಿದೆ. ಮರಾಠಿ ಮಾತನಾಡುವ ಕರ್ನಾಟಕ ರಾಜ್ಯದ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರ ಸ್ಥಳಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಲು ಸಾಧ್ಯವಾಗದ ಬಗ್ಗೆ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗರಿಕರು ಮತ್ತು ಅದರ ಸರ್ಕಾರವು ಮಹಾರಾಷ್ಟ್ರದ ಭಾಗವಾಗಲು ಕರ್ನಾಟಕದ ಗಡಿಭಾಗದ ಮರಾಠಿಗರ ಹೋರಾಟದೊಂದಿಗೆ ಇದೆ. ಈ ಗ್ರಾಮಗಳು ಮಹಾರಾಷ್ಟ್ರದ ಭಾಗವಾಗುವವರೆಗೆ ನಾವು ಅವರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಪವಾರ್ ಹೇಳಿದರು.
ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಾಠ ಭಾಷಿಗರಿದ್ದಾರೆ. ಗಡಿ ತಗಾದೆಗೆ ಸಂಬಂಧಿಸಿದಂತೆ ಮಹಾಜನ್ ಆಯೋಗ ರಚನೆ ಮಾಡಲಾಗಿತ್ತು. ಅದರ ವರದಿಯ ಪ್ರಕಾರ ಗಡಿ ವಿವಾದ ಇತ್ಯರ್ಥವಾಗಿದೆ.
ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತನಗೆ ಸೇರಬೇಕು ಎಂದು ಪ್ರತಿಪಾದಿಸುತ್ತದೆ, ಈ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಮರಾಠಿ ಮಾತನಾಡುವವರು ಇದ್ದಾರೆ ಎಂದು ವಾದಿಸುತ್ತದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ