ಶಿವಮೊಗ್ಗ: ಮಂಗನ ಕಾಯಿಲೆಗೆ ಇಂದು, ಮಂಗಳವಾರ ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ ಸದಸ್ಯ ರಾಮಸ್ವಾಮಿ ಕರುಮನೆ ((55) ಅವರಿಗೆ ಏಪ್ರಿಲ್ 24ರಂದು ಜ್ವರ ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದರು. ಬಳಿಕ ಇದು ಮಂಗನ ಕಾಯಿಲೆ ಎಂದು ದೃಢವಾಗಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು, ಮಂಗಳವಾರ ಚಿಕಿತ್ಸೆ ಫಲಿಸದೆ ಮಣಿಪಾಲ್ ಆಸ್ಪತ್ರೆಯಲ್ಲಿಯೇ ಸಾವಿಗೀಡಾಗಿದ್ದಾರೆ.
ಇನ್ನು ಕಳೆದ ತಿಂಗಳು ಈ ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 85 ವರ್ಷದ ವೃದ್ಧೆ ಜಾನಕಿ ಹೆಗಡೆ ಸಾವಿಗೀಡಾಗಿದ್ದರು. ಮಂಗನಕಾಯಿಲೆಗೆ ರಾಜ್ಯದಲ್ಲಿ ಇದು ಈ ವರ್ಷ ಎರಡನೇ ಸಾವಾಗಿದೆ.
2019-20ರಲ್ಲಿ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿಯೇ ಅನೇಕ ಜನ ಮಂಗನ ಕಾಯಿಲೆಗೆ ಸಾವಿಗೀಡಾಗಿದ್ದರು. ಸರ್ಕಾರ ಮೃತಪಟ್ಟ ಹಲವು ಕುಟುಂಬಗಳಿಗೆ ಪರಿಹಾರವನ್ನು ನೀಡಿತ್ತು. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೆಎಫ್ಡಿ ಪ್ರತಿರೋಧಕ ಲಸಿಗೆಯನ್ನು ಈ ಭಾಗದಲ್ಲಿ ನೀಡಿದ್ದರಿಂದ ಸೋಂಕು ತಹಬಂದಿಗೆ ಬಂದಿದೆ ಎಂದು ನಂಬಲಾಗಿತ್ತು.ಆದರೆ ಈ ವರ್ಷ ಸಾವು ಸಂಬಂಧಿಸಿದ್ದು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ