ನವದೆಹಲಿ: ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿ ಚಲಿಸುತ್ತಿರುವ ಕಾರಿನ ಜೊತೆಗೆ ಅವರನ್ನು ಎಳೆದೊಕೊಂಡ ಹೋದ ಪರಿಣಾಮ ಅವರು ಗಾಯಗೊಂಡ ಅಮಾನುಷ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಅಮರ್ ಕಾಲೋನಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪತ್ರಕರ್ತರೊಬ್ಬರು ಈ ಘಟನೆ ವೀಡಿಯೋವನ್ನು ಟ್ವೀಟರ್ನಲ್ಲಿ ಪ್ರಕಟಿಸಿ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇಬ್ಬರು ಚಾಲಕರ ನಡುವೆ ಜಗಳ ನಡೆಯುತ್ತಿದ್ದಾಗ ಖಾಸಗಿ ಕ್ಯಾಬ್ನಲ್ಲಿ ಕುಳಿತಿದ್ದ ಮಹಿಳೆ ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ಆಕೆಗೆ ಹೊಡೆದು ಕಾರಿನಿಂದ ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಕಾರಿನಲ್ಲಿ ಕುಳಿತ ಅವರು ಕಾರು ಚಲಿಸುತ್ತಿರುವಾಗಲೇ ಮಹಿಳೆಯನ್ನು ಕಾರ್ ಎಳೆದೊಯ್ಯುವಂತೆ ಮಾಡಿದ್ದಾರೆ. ಈ ವೇಳೆ ಮಹಿಳೆ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಮಹಿಳೆಯ ಮೊಣಕೈಗೆ ಗಾಯವಾಗಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಮಹಿಳೆ ಕ್ಯಾಬ್ನಲ್ಲಿ ಸಂಚರಿಸುತ್ತಿದ್ದ ವೇಳೆ ಇಬ್ಬರು ಚಾಲಕರ ನಡುವೆ ಮಾತಿನ ಜಗಳ ನಡೆಯುತ್ತಿತ್ತು. ಇದನ್ನು ತಡೆಯಲು ಬಂದ ಅವರ ಮೇಲೆ ಕುಪಿತಗೊಂಡ ಚಾಲಕರು ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಾರಿನ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತ್ವರಿತ ಕಾರ್ಯಾಚರಣೆಯಲ್ಲಿ ಪೊಲೀಸರು ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರೋಪಿಗಳಲ್ಲಿ ಒಬ್ಬನನ್ನು ಫರಿದಾಬಾದ್ ನಿವಾಸಿ ಉದಯವೀರ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕ ತಲೆಮರೆಸಿಕೊಂಡಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ