ಶಿರಸಿ: ಖ್ಯಾತ ಆಯುರ್ವೇದ ವೈದ್ಯ ಡಾ.ಸಾಂಬಮೂರ್ತಿ ನಿಧನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದ ಹಾಗೂ ಶಿರಸಿಯ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕರಾಗಿದ್ದ ಡಾ.ಸಾಂಬಮೂರ್ತಿ ಗಾಯತ್ರಿ (57) ಇಂದು, ಸೋಮವಾರ  ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಅವರು, ಪ್ರಖ್ಯಾತ ಆಯುರ್ವೇದ ತಜ್ಞೆ ಪತ್ನಿ ಡಾ.ಸಾವಿತ್ರಿ, ಪುತ್ರ ಸಂಯಮ ಹಾಗೂ ಪುತ್ರಿ ಸಂಜ್ಞಾ ಅವರನ್ನು ಅಗಲಿದ್ದಾರೆ. ಮೂಲತಃ ಗೋಕರ್ಣದವರಾದ ಡಾ.ಸಾಂಬಮೂರ್ತಿಯವರು ಗುರು ಶಿಷ್ಯ ಪರಂಪರೆಯಡಿ ತಮ್ಮ ಶಿಷ್ಯರಿಗೆ ನಿಯಮಿತವಾಗಿ ಸಲಹೆ ನೀಡುತ್ತಿದ್ದರು.  ಆಯುರ್‌ ವಿಜ್ಞಾನ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಅಲ್ಲದೆ,ಬೆಂಗಳೂರಿನ ಚಾಮರಾಜ ನಗರದ ಆಯುರ್ವೇದ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಡಾ.ಸಾಂಬಮೂರ್ತಿ ಗಾಯತ್ರೀ ಅವರು ಪ್ರಖ್ಯಾತ ಆಯುರ್ವೇದದ ಗುರು ಡಾ.ಗಣಪತಿ ಸೋಮಯಾಜಿ ಅವರ ಬಳಿ ಪಾರಂಪರಿಕ ವಿಧಾನದಲ್ಲಿ ಆಯುರ್ವೇದ ಶಾಸ್ತ್ರವನ್ನು ಅಧ್ಯಯನ ಮಾಡಿದವರು. ಆಯುರ್ವೇದದಲ್ಲಿ ಎಂ.ಡಿ. ಪದವಿ ಪಡೆದಿರುವ ಅವರು ಸಿದ್ಧಾಪುರದ ಧನ್ವಂತರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ತಮ್ಮ ಪತ್ನಿ ಡಾ.ಸಾವಿತ್ರಿ ಅವರ ಜೊತೆ ಶಿರಸಿಯಲ್ಲಿ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭಿಸಿದರು.
ಚಿಕಿತ್ಸೆ ನೀಡುವುದರ ಜೊತೆಗೆ ಆಯುರ್ವೇದ ಔಷಧಗಳ ತಯಾರಿಕೆ ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಾಪನವನ್ನು ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಿಷ್ಯರೊಡನೆ ಪಾರಂಪರಿಕ ಕ್ರಮದಲ್ಲಿ ಆಯುರ್ವೇದದ ಮೂಲ ಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಅಷ್ಟಾಂಗಹೃದಯ ಗ್ರಂಥಗಳನ್ನು ಆವರ್ತನ ಮಾಡುವುದು ಸಾಂಬಮೂರ್ತಿ ದಂಪತಿ ಅಧ್ಯಾಪನ ಕ್ರಮದ ವೈಶಿಷ್ಟ್ಯ. ಸ್ವರ್ಣವಲ್ಲೀ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರಿಗೂ ಆಯುರ್ವೇದ ಗ್ರಂಥ-ತ್ರಯಗಳನ್ನು ಪಾಠ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಆಯುರ್ವೇದವನ್ನೇ ಸಂಪೂರ್ಣವಾಗಿ ಅನುಷ್ಠಾನ ಮಾಡುವ ವೈದ್ಯರ ತಂಡದ ನಿರ್ಮಾಣಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಬೆಂಗಳೂರು ಮಹಾನಗರಕ್ಕೆ ತೆರಳಿ ಅಲ್ಲಿ ಆಯುರ್ವೇದ ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸಿದರು. ಹಲವು ಕಮ್ಮಟಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಪ್ರಬಂಧಗಳನ್ನು ಮಂಡಿಸಿದರು. ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆದರು. ಉಪನ್ಯಾಸಗಳನ್ನು ನೀಡಿದರು. ಆಯುರ್ವೇದ ಕೃತಿಗಳನ್ನು ಪ್ರಕಟಿಸಿದರು. ಆಯುರ್ವೇದ ಕೇವಲ ಚಿಕಿತ್ಸಾ ಕ್ರಮವಲ್ಲ; ಇದು ಸಾತ್ತ್ವಿಕ ಜೀವನ ಪದ್ಧತಿ ಎಂದು ಪ್ರತಿಪಾದಿಸಿದರು. ಯೋಗ, ಪ್ರಾಣಾಯಾಮ, ಧ್ಯಾನ, ಮಂತ್ರೋಪಾಸನೆ, ಮುಂತಾದ ಆಧ್ಯಾತ್ಮಿಕ ಸಾಧನೆಗಳನ್ನು ನಿಯಮಿತವಾಗಿ ಅನುಷ್ಠಾನ ಮಾಡಿದರು.

ಸ್ವರ್ಣವಲ್ಲೀ ಶ್ರೀಗಳ ಸಂತಾಪ

ಶ್ರೇಷ್ಠ ಆಯುರ್ವೇದ ತಜ್ಞರಲ್ಲಿ ಒಬ್ಬರಾಗಿದ್ದ ಡಾ. ಸಾಂಬಮೂರ್ತಿ ಗಾಯತ್ರೀ ಅವರು ಅಕಾಲಿಕವಾಗಿ ನಿಧನಕ್ಕೆ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಡಾ. ಸಾಂಬಮೂರ್ತಿಯವರ ನಿಧನ ವಾರ್ತೆ ಕೇಳಿ ತುಂಬಾ ನೋವುಂಟಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶುದ್ಧ ಆಯುರ್ವೇದದ ಚಿಕಿತ್ಸೆಯನ್ನು ನೀಡುತ್ತಿದ್ದರಲ್ಲದೆ, ಆಯುರ್ವೇದದ ಮೂಲಗ್ರಂಥಗಳಾದ ಚರಕ ಸಂಹಿತೆ ಸುಶ್ರುತ ಸಂಹಿತೆ ಹಾಗೂ ಅಷ್ಟಾಂಗ ಹೃದಯಗಳನ್ನು ಅರ್ಥಮಾಡಿಕೊಳ್ಳಲು ತಮಗೆ ಅವರು ತುಂಬಾ ಸಹಾಯ ಮಾಡಿದ್ದಾರೆ. ಜೊತೆಗೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ನಡೆಸುತ್ತಿರುವ ಸ್ವರ್ಣವಲ್ಲಿ ಪ್ರಭಾ ಮಾಸ ಪತ್ರಿಕೆಗೆ ಅವರು ದೀರ್ಘಕಾಲದಿಂದ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಈ ಅಕಾಲಿಕ ನಿಧನ ಆಯುರ್ವೇದ ಶಾಸ್ತ್ರದ ಪುನರುಜ್ಜೀವನಕ್ಕೆ ಒಂದು ದೊಡ್ಡ ನಷ್ಟ ಎಂದು ಶ್ರೀಗಳು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement