ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ ಮಲ್ಕಾಪುರೆ ನೇಮಕ

ಬೆಂಗಳೂರು: ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ಬಿಜೆಪಿಯ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರನ್ನು ನಿಯುಕ್ತಿ ಮಾಡಲಾಗಿದೆ. ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಲಿರುವ ಕಾರಣದಿಂದ ರಾಜೀನಾಮೆ ನೀಡಿದ್ದರು.
ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ ರಾವ್ ಮಲ್ಕಾಪುರೆ ಅವರು ಇಂದು, ಮಂಗಳವಾರ ವಿಧಾನಸೌಧದ ಕೊಠಡಿ ಸಂಖ್ಯೆ 117 ರಲ್ಲಿ ಅಧಿಕಾರ ಸ್ವೀಕರಿಸಿದರು.

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡ್ಡಿ ಹಿನ್ನೆಲೆಯಲ್ಲಿ ಅವರು ಸಭಾಪತಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. ಹೀಗಾಗಿ ವಿಧಾನ ಪರಿಷತ್ ಹಂಗಾಮಿ ಸಭಾಪತಿ ನೇಮಕಕ್ಕೆ ಬಿಜೆಪಿ ನಿರ್ಧರಿಸಿದೆ. ಹಂಗಾಮಿ ಸಭಾಪತಿ ನೇಮಕ ಸಂಬಂಧ ಸೋಮವಾರ ಸಂಜೆ ರಾಜ್ಯಪಾಲರ ಜೊತೆ ಮಾತುಕತೆ ನಡೆಸಲಾಗಿತ್ತು. ಇಂದು ಈ ಬಗ್ಗೆ ಮುಖ್ಯಮಂತ್ರಿಗಳು ಶಿಫಾರಸ್ಸು ಕಳುಹಿಸಿದ್ದು, ರಾಜ್ಯಪಾಲರು ಅನುಮೋದಿಸಿದ್ದಾರೆ.

 ತಾಂತ್ರಿಕ ಅಡ್ಡಿ ಯಾಕೆ..?

ಮೇಲ್ಮೆನೆ ಸದಸ್ಯರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿ ಅಥವಾ ಉಪ ಸಭಾಪತಿಗೆ ಸಲ್ಲಿಸಬೇಕು. ಆದರೆ ಹೊರಟ್ಟಿಯವರೇ ಸಭಾಪತಿಯಾದ ಕಾರಣ ಸಭಾಪತಿಗೆ ರಾಜೀನಾಮೆ ನೀಡಲು ಆಗುವುದಿಲ್ಲ. ಉಪ ಸಭಾಪತಿ ಸ್ಥಾನ ಖಾಲಿಯಿದೆ. ಹೀಗಾಗಿ ಹೊರಟ್ಟಿಯವರಿಗೆ ಬೇರೊಬ್ಬರ ನೇಮಕವಾಗದೆ ರಾಜೀನಾಮೆ ಸಲ್ಲಿಸುವ ಹಾಗಿಲ್ಲ, ರಾಜೀನಾಮೆ ನೀಡದೆ ಬಿಜೆಪಿ ಸೇರ್ಪಡೆ ಆಗುವ ಹಾಗಿರಲಿಲ್ಲ. ಹೀಗಾಗಿ ಈಗ ಹಂಗಾಮಿ ಸಬಾಪತಿ ನೇಮಕ ಮಾಡಲಾಗಿದೆ.
ಹಂಗಾಮಿ ಸಭಾಪತಿ ನೇಮಕದ ಬಳಿಕ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರವಾಗಲಿದ್ದು, ಬಳಿಕ ಹೊರಟ್ಟಿಯವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement