ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ, ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಘಟನೆ ಹಾಗೂ ನಂತರ ಆರೋಪಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಎನ್ಕೌಂಟ್ ಘಟನೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ ಆಯೋಗವು ತನ್ನ ವರದಿ ಸಲ್ಲಿದ್ದು, ಈ ಎನ್ಕೌಂಟರ್ ಪೊಲೀಸರು ಸೃಷ್ಟಿಸಿದ ಕತೆ ಎಂದು ತಿಳಿಸಿದೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಸಾಯಿಸುವ ಬಯಕೆಯಿಂದಲೇ ಅವರ ಮೇಲೆ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು” ಎಂದು ವರದಿ ಹೇಳಿದೆ.
ಎನ್ಕೌಟರಿನಲ್ಲಿ ಕೊಲ್ಲಲ್ಪಟ್ಟ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ವರದಿ ಹೇಳಿದೆ. ಕೊಲೆ ಆರೋಪದ ಮೇಲೆ 10 ಮಂದಿ ಪೊಲೀಸರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಸತ್ತವರಲ್ಲಿ ಶಿವ, ಜೋಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಅಪ್ರಾಪ್ತ ವಯಸ್ಸಿನವರಾಗಿದ್ದರು ಎಂದು ಅಭಿಪ್ರಾಯಕ್ಕೆ ಬಂದಿದ್ದೇವೆ” ಎಂದು ಆಯೋಗ ಹೇಳಿದೆ. ಈ ವರದಿ ಸಲ್ಲಿಕೆಯ ಬಳಿಕ ಅದರ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೆಲಂಗಾಣ ಹೈಕೋರ್ಟ್ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
2019ರ ನವೆಂಬರ್ನಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್ ಆರಿಫ್, ಜೋಲು ಶಿವ, ಜೋಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅವರ ಎನ್ಕೌಂಟರ್ ಕೂಡ ನಡೆದಿತ್ತು. ಘಟನೆಯ ಮರು ಸೃಷ್ಟಿ ಕಾರ್ಯಕ್ಕೆ ಕರೆದೊಯ್ದಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಾರಣ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದರು.
ಈ ಘಟನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಆಯೋಗವನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತ್ತು.
ಈ ಎನ್ಕೌಂಟರ್ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿರ್ಪುರ್ಕಾರ್ ಆಯೋಗ ಶಿಫಾರಸು ಮಾಡಿದೆ. ಪೊಲೀಸರ ಬಳಿ ಇದ್ದ ಬಂದೂಕುಗಳನ್ನು ಕಸಿದುಕೊಳ್ಳಲು ಈ ಆರೋಪಿಗಳು ಪ್ರಯತ್ನಿಸಿದ್ದರು. ಆಗ ಅನಿವಾರ್ಯವಾಗಿ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂಬ ಪೊಲೀಸರ ಆರೋಪ ಸುಳ್ಳು ಎಂದು ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ