ಮಸೀದಿಗಳಿಂದ ತೆಗೆದ ಧ್ವನಿವರ್ಧಕಗಳನ್ನು ಶಾಲೆ, ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ: ಯೋಗಿ ಆದಿತ್ಯನಾಥ

ನವದೆಹಲಿ: ಉತ್ತರ ಪ್ರದೇಶದ ಮಸೀದಿಗಳಿಂದ ತೆಗೆದುಹಾಕಿದ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ದಾನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಹೇಳಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿ ಆಡಳಿತದ ರಾಜ್ಯದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಆರ್‌ಎಸ್‌ಎಸ್ ಸಂಬಂಧಿತ ವಾರಪತ್ರಿಕೆಗಳಾದ ‘ಪಾಂಚಜನ್ಯ’ ಮತ್ತು ‘ಆರ್ಗನೈಸರ್’ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಆದಿತ್ಯನಾಥ, “ಹಲವು ರಾಜ್ಯಗಳಲ್ಲಿ ಚುನಾವಣೆ ಮುಗಿದ ನಂತರ ಗಲಭೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಚುನಾವಣೆಯ ಸಮಯದಲ್ಲಿ ಅಥವಾ ನಂತರ ಯಾವುದೇ ಗಲಭೆಗಳು ನಡೆದಿಲ್ಲ. ಸರ್ಕಾರ ರಚನೆಯಾದ ನಂತರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹನುಮ ಜಯಂತಿ ಆಚರಣೆ ಶಾಂತಿಯುತವಾಗಿ ಜರುಗಿತು. ಇದೇ ಉತ್ತರ ಪ್ರದೇಶದಲ್ಲಿ ಈ ಹಿಂದೆ ಸಣ್ಣಪುಟ್ಟ ಸಮಸ್ಯೆಗಳು ಸಹ ಗಲಭೆಗೆ ಕಾರಣವಾಗಿತ್ತು ಎಂದು ಅವರು ಹೇಳಿದರು.

ಈಗ ನೀವು ಮೊದಲ ಬಾರಿಗೆ ಈದ್ ನಮಾಜ್ ಅನ್ನು ರಸ್ತೆಗಳಲ್ಲಿ ಮಾಡದಿರುವುದನ್ನು ನೋಡಿರಬೇಕು. ಈಗ ಮಸೀದಿಯ ಧ್ವನಿವರ್ಧಕದ ಧ್ವನಿ ಕಡಿಮೆಯಾಗಿದೆ ಅಥವಾ ಧ್ವನಿವರ್ಧಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈಗ ತೆಗೆದು ಹಾಕಲಾದ ಈ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಬಳಕೆಗಾಗಿ ನೀಡಲಾಗುತ್ತಿದೆ ಎಂದು ಆದಿತ್ಯನಾಥ ಹೇಳಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ರಾಜ್ಯದಲ್ಲಿ ಬಿಡಾಡಿ ದನಗಳ ಸಮಸ್ಯೆ ಕುರಿತು ಮಾತನಾಡಿದ ಅವರು, ಇದನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಪಟ್ಟಿ ಮಾಡಿದರು. “…ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಅದು ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿತು. ಆಗ ಬಿಡಾಡಿ ದನಗಳು ರಸ್ತೆ, ಗದ್ದೆಗಳಲ್ಲಿ ಓಡಾಡುತ್ತಿದ್ದವು. ಮೊದಲು ಅಕ್ರಮ ಕಸಾಯಿಖಾನೆಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಸವಾಲನ್ನು ಎದುರಿಸಲು ನಾವು 5,600 ಬಿಡಾಡಿ ಗೋಶಾಲೆಗಳನ್ನು ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು. ಹಸುವಿನ ಸಗಣಿಯಿಂದ ಸಿಎನ್‌ಜಿ ಉತ್ಪಾದಿಸಲು ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದ್ದು, ಅದನ್ನು ಜನರಿಂದ ಕೆಜಿಗೆ 1 ರೂಪಾಯಿಗೆ ಖರೀದಿಸಲಾಗುವುದು ಎಂದ ಅವರು, ಗೋವುಗಳ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರ ಮತ್ತು ನವೀಕರಿಸಿದ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದ ಬಗ್ಗೆಯೂ ಅವರು ಮಾತನಾಡಿದರು. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರ ಯಾತ್ರಾಸ್ಥಳ ಅಭಿವೃದ್ಧಿ ಪಡಿಸುತ್ತಿದೆ ಎಂದರು.

.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement