ಹುಬ್ಬಳ್ಳಿ ಭೀಕರ ಅಪಘಾತ: ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಣೆ

ನವದೆಹಲಿ: ಹುಬ್ಬಳ್ಳಿಯಲ್ಲಿ ಇಂದು, ಮಂಗಳವಾರ ನಸುಕಿನ ಜಾವ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ 8 ಮಂದಿಸಾವಿಗೀಡಾಗಿದ್ದು, ಮೃತರ ಕುಟುಂಬಗಳಿಗೆ ಪ್ರಧಾನಿ ಕಚೇರಿ ಪರಿಹಾರ ಘೋಷಣೆ ಮಾಡಿದೆ.
ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಪಿಎಂಒ ಕಚೇರಿ ಟ್ವೀಟ್ ಮಾಡಿದೆ. ಅಲ್ಲದೆ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಹಲವರು ಸಾವಿಗೀಡಾಗಿರುವುದು ಅತ್ಯಂತ ನೋವಿನ ವಿಚಾರ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹುಬ್ಬಳ್ಳಿ ತಾರಿಹಾಳ ಬಳಿ ನ್ಯಾಷನಲ್ ಟ್ರಾವೆಲ್ಸ್​ನ ಬಸ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ 8 ಜನರು ಮೃತಪಟ್ಟಿದ್ದರು. ಜೊತೆಗೆ ದುರ್ಘಟನೆಯಲ್ಲಿ 26 ಜನರು ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೃತರನ್ನು ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೆ (59), ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ನಾಗರಾಜ ಆಚಾರ್(56), ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್‌ ಬೇಗ್(17), ಕೊಲ್ಲಾಪುರದ ನಿವಾಸಿಗಳಾದ ಅಕ್ಷಯ ದವರ್(28), ಅಕೀಫ್(40) ಹಾಗೂ ಅಫಾಕ್( 41) ಎಂದು ಗುರುತಿಸಲಾಗಿದೆ.
ಬಸ್‌ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಹೆದರಲ್ಲ: ಕೆ.ಎಸ್.ಈಶ್ವರಪ್ಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement