ಹಾಡುತ್ತಿರುವಾಗಲೇ ವೇದಿಕೆಯಲ್ಲಿ ಕುಸಿದುಬಿದ್ದು ನಿಧನರಾದ ಗಾಯಕ ಎಡವ ಬಶೀರ್

ಅಲ್ಲಪುಜ(ಕೇರಳ): ಕೇರಳದ ಅಲಪ್ಪುಳದಲ್ಲಿ ಹಾಡುತ್ತಿರುವಾಗಲೇ ಕುಸಿದುಬಿದ್ದು ಹಿರಿಯ ಗಾಯಕ ಎಡವ ಬಶೀರ್ ಶನಿವಾರ ನಿಧನರಾಗಿದ್ದಾರೆ.
ಎಡವ ಬಶೀರ್ ಅವರು ಬ್ಲೂ ಡೈಮಂಡ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಕೆ.ಜೆ.ಯೇಸುದಾಸ್ ಅವರ ಜನಪ್ರಿಯ ಹಿಂದಿ ಗೀತೆ ‘ಮಾನಾ ಹೋ ತುಮ್’ ಹಾಡನ್ನು ಹಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ವೇದಿಕೆಯಲ್ಲೇ ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.ಎಡವ ಬಶೀರ್ ಅವರಿಗೆ 78 ವರ್ಷ ವಯಸ್ಸಾಗಿತ್ತು.

ಬಶೀರ್ ಜನಿಸಿದ್ದು ತಿರುವನಂತಪುರಂ ಜಿಲ್ಲೆಯ ಎಡವ ಎಂಬಲ್ಲಿ. ಅವರು ‘ಸ್ವಾತಿ ತಿರುನಾಳ್ ಮ್ಯೂಸಿಕ್ ಅಕಾಡೆಮಿ’ಯಿಂದ ಸಂಗೀತದಲ್ಲಿ ಶೈಕ್ಷಣಿಕ ಪದವಿಯನ್ನು ಪಡೆದರು ಮತ್ತು ನಂತರ 1972 ರಲ್ಲಿ ಅವರು ಕೊಲ್ಲಂ ಸಂಗೀತಾಲಯ ಗಾನಮೇಳ ತಂಡವನ್ನು ರಚಿಸಿದರು.
ಬಶೀರ್ ಅವರು ತಮ್ಮ ವೇದಿಕೆಯ ಪ್ರದರ್ಶನಗಳಿಗೆ ಪ್ರಸಿದ್ಧರಾಗಿದ್ದರು ಮತ್ತು ಅವರು ತಮ್ಮ ಗಾನಮೇಳ ತಂಡದಲ್ಲಿ ಅನೇಕ ಸಂಗೀತ ವಾದ್ಯಗಳನ್ನು ಪರಿಚಯಿಸಿದರು.

ಬಶೀರ್ ಅವರು ಮಲಯಾಳಂ ಚಿತ್ರರಂಗದಲ್ಲಿ ‘ರಘು ವಂಶಂ’ ಚಲನಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು. ‘ಮುಕ್ಕುವನೆ ಸ್ನೇಹ ಬೂತಂ’ ಚಿತ್ರಕ್ಕಾಗಿ ಅವರ ‘ಅಳಿತಿರ ಮಲಕಲ್ ಅಳಲಿಂತೆ ಮಲಕಲ್’ ಹಾಡು ಹಿಟ್ ಆಗಿತ್ತು. ಅವರು ಸಂಗೀತ ಕಛೇರಿಗಳಲ್ಲಿ ನಿರತರಾಗಿದ್ದರಿಂದ ಚಿತ್ರದಲ್ಲಿ ಹಾಡುವ ಅವಕಾಶಗಳನ್ನು ನಿರಾಕರಿಸಿದರು.ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳಿಂದ ಬಶೀರ್ ಜನರ ಹೃದಯ ಗೆದ್ದಿದ್ದರು. ಸಂಗೀತ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಕೊಲ್ಲಂನಲ್ಲಿ ನೆಲೆಸಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement