ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಸಿಕ್ಕಿರುವುದಕ್ಕೆ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರು, ಸಂಘ ಪರಿವಾರದ ಆಶೀರ್ವಾದ ಮತ್ತು ರಾಯರ ಪವಾಡ ಎಂದು ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.
ನಟ ಜಗ್ಗೇಶ್ ಅವರು ಮಂತ್ರಾಲಯ ರಾಯರ ಪರಮ ಭಕ್ತರು. ಅಂತೆಯೇ ಮಂತ್ರಾಲಯಕ್ಕೆ ಆಗಾಗ ತೆರಳಿ ದರ್ಶನ ಪಡೆದು ಬರುತ್ತಾರೆ. ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಇಂದು ಪ್ರಕಟಿಸಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೆ ನಟ ಜಗ್ಗೇಶ್ಗೆ ಟಿಕೆಟ್ ಘೋಷಿಸಲಾಗಿದೆ.
ಎರಡನೇ ಸ್ಥಾನಕ್ಕೆ ಒಂದು ರೀತಿಯಲ್ಲಿ ಅಚ್ಚರಿ ಆಯ್ಕೆ ಎನ್ನುವಂತೆ ನಟ ಜಗ್ಗೇಶ್ ಹೆಸರು ಪ್ರಕಟಿಸಲಾಗಿದೆ. ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆದ ವೇಳೆ ಬಿಜೆಪಿಗೆ ಬಂದಿದ್ದ ಜಗ್ಗೇಶ್ ನಂತರ ರಾಜಕೀಯ ಮುನ್ನೆಲೆಗೆ ಬರಲು ಸಾಕಷ್ಟು ಶ್ರಮಿಸಿದ್ದರು. ಪರಿಷತ್ ಸದಸ್ಯರಾಗಿ ನಂತರ ಯಶವಂತಪುರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕು ಕಣಕ್ಕಿಳಿದು ಪರಾಜಯಗೊಂಡಿದ್ದರು. ಇದೀಗ ಅಚ್ಚರಿಯ ಆಯ್ಕೆಯಲ್ಲಿ ರಾಜ್ಯಸಭೆಗೆ ಟಿಕೆಟ್ ನೀಡುವ ಮೂಲಕ ಜಗ್ಗೇಶ್ ಮತ್ತೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ