ನವದೆಹಲಿ: ಕೋವಿಡ್-19ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಪಿಎಂ ಕೇರ್ಸ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು, ಮಂಗಳವಾರ ಚಾಲನೆ ನೀಡಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು, ಮಾಸಿಕ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಪಿಎಂ-ಕೇರ್ಸ್ ಅಡಿ ನೀಡಲಾಗುತ್ತಿದೆ.
ದೇಶಾದ್ಯಂತ ಫಲಾನುಭವಿ ಮಕ್ಕಳು ಜಿಲ್ಲೆ ಮತ್ತು ತಾಲೂಕು ಕಚೇರಿಯಲ್ಲಿ ಹಾಜರಿದ್ದ ಪ್ರಧಾನಿ ಅವರ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಅವರು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
ಪ್ರತಿದಿನ ಹೋರಾಟದ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೋವಿಡ್ ವೇಳೆ ಸಮಾಜ ಸೂಕ್ಷ್ಮತೆಯಿಂದ ವರ್ತಿಸಿದೆ. ದೇಶದ ಪ್ರತಿಯೊಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಬೆನ್ನಿಗೆ ನಿಂತು ಅವರ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.
ತೊಂದರೆಗೊಳಗಾದ ಮಕ್ಕಳಿಗೆ ಪಿಎಂ ಕೇರ್ಸ್ ನೆರವಾಗಲಿದೆ. ಮಕ್ಕಳಿಗೆ ಶೈಕ್ಷಣಿಕ ವೆಚ್ಚ, ದೈನಂದಿನ ಖರ್ಚುಗಳ ನಿಭಾವಣೆ, ಸಮವಸ್ತ್ರ, ಶಿಕ್ಷಣದ ಪರಿಕರಗಳ ಖರೀದಿ ಸೇರಿದಂತೆ ವಿವಿಧ ಯೋಜನೆಗಳಡಿ ಮಾಸಿಕ 4 ಸಾವಿರ ಶಿಷ್ಯವೇತನ ನೀಡಲಾಗುತ್ತದೆ. 18ರಿಂದ 23 ವರ್ಷದ ವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು, ಬಳಿಕ 10 ಲಕ್ಷ ರೂಪಾಯಿ ದೊರೆಯಲಿದೆ. ವೃತ್ತಿಪರ ಕೋರ್ಸ್ಗಳಿಗೆ ಸೇರ ಬಯಸುವ ಮಕ್ಕಳಿಗೆ ಸಾಲ ಪಡೆಯಲು ಪಿಎಂ ಕೇರ್ ನೆರವಾಗಲಿದೆ. ಅವರ ಭವಿಷ್ಯಕ್ಕೆ ಮುಂದೆ ಹಣ ಕಾಸಿನ ಅಗತ್ಯ ಕಂಡು ಬಂದರೆ ಆಗಲೂ ಪಿಎಂ ಕೇರ್ಸ್ ಜೊತೆಗೆ ಇರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ಮೂಲಕ 5 ಲಕ್ಷ ರೂಪಾಯಿ ವರೆಗೂ ವೈದ್ಯಕೀಯ ವೆಚ್ಚ ಭರಿಸಲಾಗುವುದು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಭಾವನಾತ್ಮಕ ಸಹಯೋಗ ಹಾಗೂ ಮಾನಸಿಕ ಸ್ಥೈರ್ಯದ ಅಗತ್ಯವಿದೆ. ಅದಕ್ಕಾಗಿ ಸಂವಾದ ಹೆಲ್ಪ್ ಲೈನ್ ಆರಂಭಿಸಲಾಗಿದೆ, ಅಲ್ಲಿ ಮನೋತಜ್ಞರೊಂದಿಗೆ ಸಮಾಲೋಚನೆ ನಡೆಸಬಹುದು ಎಂದು ಹೇಳಿದರು.
ದೇಶದ ಸಂವೇದನೆ ನಿಮ್ಮ ಜೊತೆಗಿದೆ.ಯಾರೂ ಅಪ್ಪ ಅಮ್ಮ ಇಲ್ಲ ಎಂದು ನೋಂದುಕೊಳ್ಳಬಾರದು. ಅಪ್ಪ-ಅಮ್ಮ ಇಲ್ಲದಿದ್ದರೂ ಭಾರತ ಮಾತೆ ನಿಮ್ಮ ಜೊತೆಯಲ್ಲಿ ಇದ್ದಾಳೆ. ಪಿಎಂ ಕೇರ್ಸ್ ಒಂದು ವ್ಯಕ್ತಿ ಅಥವಾ ಸಂಸ್ಥೆಯಲ್ಲ. ಪ್ರತಿಯೊಬ್ಬರ ಸ್ಪಂದನೆ ಎಂದು ಮಾರ್ಮಿಕವಾಗಿ ಹೇಳಿದರು.
ಓದು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಒಳ್ಳೆಯ ಪುಸ್ತಕದಿಂದ ಮಾರ್ಗದರ್ಶನ ಕೂಡ ದೊರೆಯಲಿದೆ. ಪುಸ್ತಕ ಎಲ್ಲರಿಗೂ ಒಳ್ಳೆಯ ಸಂಗಾತಿಯಾಗಲಿದೆ ಎಂದು ಅವರು, ದೇಶದಲ್ಲಿ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಅಭಿಯಾನಗಳು ಚಾಲ್ತಿಯಲಿವೆ, ಕೋವಿಡ್ ವೇಳೆ ಸಂಕಷ್ಟಕ್ಕೆ ಒಳಗಾದ ಮಕ್ಕಳನ್ನು ಅದರೊಂದಿಗೆ ಸೇರಿಸಿಕೊಳ್ಳಬೇಕು. ಮಕ್ಕಳು ಕೂಡ ಓದಿನ ಜೊತೆಗೆ ಯೋಗವನ್ನು ಜೀವನದ ಅಂಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರ ಕೊರೊನಾ ಕಾಲದಲ್ಲಿ ವಿಜ್ಞಾನಿಗಳು, ವೈದ್ಯರು, ಯುವಕರ ಮೇಲೆ ನಂಬಿಕೆ ಇಟ್ಟಿತ್ತು. ಸಂಕಷ್ಟ ಸಮಯದಲ್ಲಿ ಅವರ ಸೇವೆ, ತ್ಯಾಗಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಪಿಎಂ ಕೇರ್ಸ್ ನಿಂದ ಆಸ್ಪತ್ರೆಗಳ ಸಜ್ಜುಗೊಳ್ಳುವಿಕೆ, ಆಮ್ಲಜನ ಖರೀದಿ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಋಣಾತ್ಮಕ ಪರಿಸ್ಥಿತಿಯಲ್ಲೂ ಭಾರತ ಸಕಾರಾತ್ಮಕ ಭಾವನೆಯೊಂದಿಗೆ ಸವಾಲನ್ನು ಎದುರಿಸಿದೆ. ಅನ್ಯ ದೇಶಗಳಿಗೆ ಲಸಿಕೆ ಹಾಗೂ ಔಷ ಪೂರೈಸಿದ್ದೇವೆ ಎಂದರು ಹೇಳಿದರು.
ನಮ್ಮ ಸರ್ಕಾರ 8 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ಜನತೆ ಸರ್ಕಾರದ ಮೇಲಿಟ್ಟಿರುವ ವಿಶ್ವಾಸ ಅಭೂತಪೂರ್ವವಾಗಿದೆ. 2014ಕ್ಕೂ ಮೊದಲುಸಾವಿರಾರು ಕೋಟಿ ಹಗರಣಗಳು, ಸ್ವಜನಪಕ್ಷಪಾತ, ದೇಶಾದ್ಯಂತ ಹರಡಿರುವ ಭಯೋತ್ಪಾದಕ ಸಂಘಟನೆಗಳು, ಪ್ರಾದೇಶಿಕ ತಾರತಮ್ಯ ಸೇರಿದಂತೆ ಹಲವಾರು ವಿಷವರ್ತುಲದಿಂದ ಕ್ರಮೇಣ ದೇಶ ಹೊರಬರುತ್ತಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ