ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ ವಜಾ, ಬಸವರಾಜಪ್ಪ ನೂತನ ಅಧ್ಯಕ್ಷ

ಶಿವಮೊಗ್ಗ : ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನಾಗಿ ಹೆಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು, ಮಂಗಳವಾರ ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘದಿಂದ ನಡೆದ ಮಹತ್ವದ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ವಜಾ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ 18 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಭೆ ಬಳಿಕ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿರುವುದನ್ನು ಖಂಡನೀಯ.ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

1980ರ ಜುಲೈ 23 ಹುಬ್ಬಳ್ಳಿಯಲ್ಲಿ ರೈತಸಂಘಟನೆ ಆರಂಭವಾಗಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಬೀದರ, ಕಲಬುರಗಿ ಸೇರಿ 24 ಜಿಲ್ಲೆಗಳಲ್ಲಿ ಸಂಘಟನೆ ವ್ಯಾಪಿಸಿದೆ. ತ್ಯಾಗ ಬಲಿದಾನದಿಂದ ಕಟ್ಟಿದ ಸಂಘಟನೆ ಕಟ್ಟಲಾಗಿದೆ. ಲಕ್ಷಾಂತರ ರೈತರು ಏಟು ತಿಂದಿದ್ದೇವೆ, ಜೈಲುವಾಸ ಅನುಭವಿಸಿದ್ದೇವೆ. ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಘಟನೆ ಹಳಿ ತಪ್ಪಿತು. ಮೊದಲೆಲ್ಲ ಮರದ ಕೆಳಗೆ ಸಭೆ ನಡೆಸಿ ಯಾವ ಖರ್ಚಿಲ್ಲದೆ ಸಂಘಟನೆ ನಡೆಸಲಾಯಿತು. ಇತ್ತೀಚೆಗೆ ರಾಜಕೀಯ ಪಕ್ಷಗಳ ಮಧ್ಯಪ್ರವೇಶದಿಂದ ಸಂಘಟನೆ ಪ್ರಾಮಾಣಿಕರ ಕೈತಪ್ಪಿ ಯಾರ್ಯಾರೋ ಕೈಗೆ ಹೋಯ್ತು ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ಮೊದಲ ಬಾರಿಗೆ ರೈತಸಂಘದ ಅಧ್ಯಕ್ಷರೊಬ್ಬರನ್ನು ವಜಾ ಮಾಡಲಾಗಿದೆ. ಸತ್ಯಶೋಧನಾ ಸಮಿತಿ ತನಿಖೆ ನಂತರ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಅವರನ್ನು ಉಚ್ಚಾಟನೆ ಮಾಡಲಾಗುವುದು ಎಂದು ತಿಳಿಸಿದರು.
ರೈತ ಸಂಘ ನಾಶ ಮಾಡಿದವರು ಮುಖಂಡರೇ ಹೊರತು ರೈತರಲ್ಲ. ರೈತ ಸಂಘಟನೆ ಕಟ್ಟಲು ನನ್ನ ಎಲ್ಲ ಶ್ರಮ ಹಾಕುತ್ತೇನೆ. ಸಂಘಟನೆಯಿಂದ ದೂರವಾದವರನ್ನು ಮತ್ತೆ ಕರೆ ತರುತ್ತೇವೆ ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಮೊನ್ನೆ ಸ್ಟಿಂಗ್ ಆಪರೇಷನ್ ನಡೆದು ವಾಹಿನಿಯೊಂದರಲ್ಲಿ ರೈತ ಸಂಘದ ಪದಾಧಿಕಾರಿಯ ಭ್ರಷ್ಟತನ ಬಯಲಾಗಿದೆ. ಹಸಿರು ಟವೆಲ್ ಹಾಕಿಕೊಂಡು ಓಡಾಡುವುದು ಕಷ್ಟವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ನಿನ್ನೆ ಕೆಲವು ಕಾರ್ಯಕರ್ತರು ಟವೆಲ್ ಅನ್ನು ಬೈಕ್ ನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಮ್ಮ ಸಂಘಟನೆ ಇದುವರೆಗೆ ರಾಜ್ಯಮಟ್ಟದ ಸದಸ್ಯರಿಗೆ ವಾಟ್ಸಾಪ್ ನಲ್ಲೇ ಮೆಮೋ ಹಾಕಿ ಮೀಟಿಂಗ್ ಕರೆಯಲಾಗುತ್ತದೆ. ಅದೇ ರೀತಿ ನಾನೇ ಮೀಟಿಂಗ್ ಕರೆದಿದ್ದೆ, ಆ ಸಭೆಗೆ ಯಾರೂ ಹೋಗದಂತೆ ಸೂಚಿಸಲಾಗಿತ್ತು. 18 ಜಿಲ್ಲೆಗಳ ಪದಾಧಿಕಾರಿಗಳು, ಶೇ. 75 ರಷ್ಟು ಮಂದಿ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ತಮ್ಮ ವಿರುದ್ಧ ವಾಹಿನಿಯಲ್ಲಿ ಬಂದ ಭ್ರಷ್ಟಾಚಾರದ ಸುದ್ದಿಯನ್ನು ಕೋಡಿಹಳ್ಳಿ ಅಲ್ಲಗಳೆಯಲಿಲ್ಲ. ಅದರಲ್ಲಿ ನಾನಿಲ್ಲ ಎಂದು ಅವರು ಸ್ಪಷ್ಟಪಡಿಸಬೇಕಿತ್ತು. ಅವರು ನಮ್ಮ ಮನೆಯಲ್ಲಿ ಉಂಡು ತಿಂದು ನನಗೆ ಮೋಸ ಮಾಡಿದ್ದಾರೆ ಎಂದಷ್ಟೆ ಹೇಳಿದ್ದು, ಈ ಮೂಲಕ ಅದೆಲ್ಲವೂ ಸತ್ಯ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಈಗ ತನಿಖೆಗೆ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಒಂದು ವರ್ಷ ಹಿಂದಿನದನ್ನು ಈಗ್ಯಾಕೆ ಹೊರಗೆ ತಂದಿದ್ದಾರೆ ಎಂದೆಲ್ಲ ಪ್ರಶ್ನಿಸಿದ್ದಾರೆ. ನೀವು ಕೇಜ್ರಿವಾಲ್ ಜೊತೆ ಸೇರಿ ಪ್ರಾಮಾಣಿಕನೆಂದು ತೋರಿಸಿಕೊಂಡಿದ್ದರಿಂದ ಮಾಧ್ಯಮಗಳಲ್ಲಿ ಭಿತ್ತರವಾಗಿದೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಬೇಕಿತ್ತು. ಮೊದಲೇ ಅವರು ರಾಜೀನಾಮೆ ಕೊಡಬೇಕಿತ್ತು. ಈಗ ನಾವು ರೈತ ಸಂಘಟನೆಯಿಂದ ಕೋಡಿಹಳ್ಳಿ ಅವರನ್ನು ಹೊರಹಾಕಿದ್ದೇವೆ ಎಂದರು.
ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬೆಳೆಸುತ್ತೇವೆ. ಮೂಲ ಸ್ಥಾಪಕರಾದ ಹೆಚ್.ಎಸ್. ರುದ್ರಪ್ಪ, ಡಾ. ಚಿಕ್ಕಸ್ವಾಮಿ, ಕಡಿದಾಳ ಶಾಮಣ್ಣ, ಎನ್.ಡಿ. ಸುಂದರೇಶ, ಪ್ರೊ ನಂಜುಂಡಸ್ವಾಮಿ ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಈ ಹಿಂದೆನಂತೆಯೇ ಸಂಘಟನೆ ನಡೆಯಲಿದೆ. ಇನ್ಮುಂದೆ ನಮ್ಮ ಯಾವುದೇ ಬ್ಯಾನರ್‌ಗಳಲ್ಲಿ ಅಧ್ಯಕ್ಷರ ಫೋಟೋ ಇರುವುದಿಲ್ಲ. ಸಂಘಟನೆ ಸ್ಥಾಪಿಸಿದ ಹಿರಿಯರ ಫೋಟೋ ಮಾತ್ರ ಬಳಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಕುರುವ ಗಣೇಶ, ಶಶಿಕಾಂತ್ ಪಡಸಲಗಿ, ಸಿದ್ಧವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ ಮೊದಲಾದವರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement