ಗುಜರಾತ್‌ : ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್ ಈಗ ಬಿಜೆಪಿಗೆ ಸೇರ್ಪಡೆ

ಗಾಂಧಿನಗರ (ಗುಜರಾತ್): ಕಳೆದ ತಿಂಗಳು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದ ಹಾರ್ದಿಕ್ ಪಟೇಲ್ ಇಂದು, ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಇಂತಹ ವೇಳೆ ಅವರು ಕಾಂಗ್ರೆಸ್‌ ಬಿಟ್ಟು ಕಮಲ ಹಿಡಿದಿದ್ದಾರೆ.
ಗಾಂಧಿನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಇತರೆ ನಾಯಕರ ಸಮ್ಮುಖದಲ್ಲಿ ಪಟೇಲ್ ಇಂದು​, ಗುರುವಾರ ಬಿಜೆಪಿ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಹಾರ್ದಿಕ್​ ಪಟೇಲ್​, “ಇಂದು ನಾನು ಹೊಸ ಅಧ್ಯಾಯ ಆರಂಭಿಸುತ್ತಿದ್ದು, ಬಿಜೆಪಿಯಲ್ಲಿ ನಾನು ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ. ನಾನು ಯಾವುದೇ ಹುದ್ದೆಗಾಗಿ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಕೆಲಸ ಮಾಡಲು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಾನು ಕೂಡ ಮೋದಿಯವರ ರೀತಿ ಕೆಲಸ ಮಾಡಬೇಕು. ಪ್ರಧಾನಿ ಮೋದಿ ಇಡೀ ಜಗತ್ತಿಗೆ ಹೆಮ್ಮೆ ಎಂದು ಪಟೇಲ್ ಪ್ರಧಾನಿಯನ್ನು ಹೊಗಳಿದರು. ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆತರಲು ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ.
ಗುಜರಾತ್​ನಲ್ಲಿ ಪ್ರಭಾವಿ ಪಾಟಿದಾರ್​ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದ ಹಾರ್ದಿಕ್ ಪಟೇಲ್​ 2019 ರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ​ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಾಂಗ್ರೆಸ್ ತನ್ನನ್ನು ಬದಿಗೊತ್ತಿದೆ ಎಂದು ಪಟೇಲ ಆರೋಪಿಸಿದ್ದರು.
ಅವರು ಮೇ 18 ರಂದು ಹಾರ್ದಿಕ್ ಪಟೇಲ್​ ‌ಕಾಂಗ್ರೆಸ್‌ ತೊರೆದಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾರ್ದಿಕ್ ಪಟೇಲ್ ಅವರಿಗೆ ಪಕ್ಷದಲ್ಲಿ ಮುಂದುವರಿಯುವಂತೆ ಸಲಹೆ ನೀಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement