ಕಲಬುರಗಿ : ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ಸಮೀಪದಲ್ಲಿ ಇಂದು, ಶುಕ್ರವಾರ ಬೆಳಗ್ಗೆ ಸಂಭವಿಸಿದೆ.ಏಳು ಜನರು ಸಜೀವವಾಗಿ ದಹನವಾಗಿದ್ದಾರೆ ಹಾಗೂ 22 ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಕೆಲವು ದೇಹಗಳು ಸುಟ್ಟು ಕರಕಲಾಗಿವೆ. ಹೀಗಾಗಿ ಮೃತರ ವಿವರಗಳು ಲಭ್ಯವಾಗಿಲ್ಲ.
ಸುಟ್ಟಿರುವ ಬಸ್ಸಿನಲ್ಲಿ ಚಾಲಕ ಸೇರಿ ಬಸ್ ನಲ್ಲಿ ಸುಮಾರು 35 ಜನರಿದ್ದರು ಎಂದು ಎನ್ನಲಾಗಿದೆ. ಅವರಲ್ಲಿ ಹದಿನೈದು ಜನರು ಹೊರಬಂದಿರುವ ಲೆಕ್ಕ ಸಿಕ್ಕಿದೆ. ಇನ್ನೂ ಕೆಲವರು ಪಾರಾಗಿ ಹೊರ ಬಂದಿರಬಹುದು. ಆದರೆ ಬಸ್ಸಿನಲ್ಲಿ ಸಿಲುಕಿದವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಹೇಳಲಾಗುತ್ತಿದೆ.
ಕಮಲಾಪುರದಿಂದ ಹುಮನಾಬಾದ ಕಡೆಗೆ ಹೋಗುವ ರಸ್ತೆಯಲ್ಲಿ ಗೂಡ್ಸ್ ವಾಹನ ಬಸ್ ಪರಸ್ಪರ ಡಿಕ್ಕಿ ಹೊಡೆದ ನಂತರ ಬಸ್ ಹಾಗೆ ಕೊಂಚ ದೂರ ಹೋಗಿ ಹೆದ್ದಾರಿಯಲ್ಲಿನ ಸೇತುವೆಗೆ ಡಿಕ್ಕಿ ಹೊಡೆದು ತಗ್ಗಿನಲ್ಲಿ ಉರುಳಿ ಬಿದ್ದಿದೆ. ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಗೋವಾದಿಂದ ಹೈದರಾಬಾದಿಗೆ ಹೋಗುತ್ತಿತ್ತು. ಪ್ರಯಾಣಿಕರು ನಿದ್ರೆಯ ಮಂಪರಿನಲ್ಲಿದ್ದರು. ಹೀಗಾಗಿ ಅವರಿಗೆ ಹೊರ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಅನೇಕರು ಬಸ್ಸಿನ ಗಾಜು ಒಡೆದು ಹೊರ ಬಂದಿದ್ದಾರೆ.
ಸ್ಥಳಕ್ಕೆ ಎಸ್ಪಿ ಇಶಾ ಪಂತ್, ಹೆಚ್ಚುವರಿ ದೌಡಾಯಿಸಿ ರಕ್ಷಣಾ ಕಾರ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಮಲಾಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ . ಸ್ಥಳೀಯರು ರಕ್ಷಣಾ ಕೆಲಸಕ್ಕೆ ಕೈಜೋಡಿಸಿದ್ದಾರೆ.
ಏತ್ಮಧ್ಯೆ ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಕಲಬುರಗಿ ಜಿಲ್ಲೆಯ ಕಮಲಾಪುರದ ಹೊರವಲಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಅಪಘಾತದಿಂದ ಹೊತ್ತಿ ಉರಿದ ಖಾಸಗಿ ಬಸ್ ನಲ್ಲಿ ಒಂದೇ ಕುಟುಂಬದ 35 ಮಂದಿ ಪ್ರಯಾಣಿಸುತ್ತಿದ್ದರು. ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ