ಹೆಂಡತಿ ಜಮೀನು ಮಾರಲು ಒಪ್ಪಿಗೆ ನೀಡಲ್ಲವೆಂದು ಇಬ್ಬರು ಮಕ್ಕಳಿಗೆ ವಿಷತಿನ್ನಿಸಿದ ಭೂಪ. ಓರ್ವ ಮಗು ಸಾವು

ವಿಜಯಪುರ: ದ್ವೇಷ, ಹಠ ಸಾಧಿಸಲು ಎಂತಹ ನೀಚ ಕೃತ್ಯಕ್ಕೂ ಇಳಿಯುತ್ತಾರೆ ಎಂಬುದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಮಕ್ಕಳಿಗೇ ವಿಷ ನೀಡಿದ್ದಾನೆ.
ಜಮೀನು ಮಾರಲು ಹೆಂಡತಿ ಒಪ್ಪಿಗೆ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಗಂಡ ತನ್ನಿಬ್ಬರು ಮಕ್ಕಳಿಗೆ ಎಗ್​ರೈಸ್​ನಲ್ಲಿ ವಿಷ ಬೆರೆಸಿ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಎಗ್​ರೈಸ್​ ತಿಂದ ಎರಡೂವರೆ ವರ್ಷದ ಮಗು ಸಾವಿಗೀಡಾಗಿದ್ದು, ಐದು ವರ್ಷದ ಮಗಳು ಅಸ್ವಸ್ಥಳಾಗಿದ್ದಾಳೆ.
ಗೋನಾಳ ಗ್ರಾಮದ ನಿವಾಸಿ ಚಂದ್ರಶೇಖರ ಅಗಸನಾಳ ಎಂಬಾತ ಮೈತುಂಬಾ ಸಾಲ ಮಾಡಿಕೊಂಡಿದ್ದರಿಂದ ಸಾಲ ತೀರಿಸಲೆಂದು ತನ್ನ ಸ್ವಂತೂರಾದ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿದ್ದ ಹೊಲವನ್ನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಇದೇ ವಿಚಾರಕ್ಕೆ ಜಗಳ ಮಾಡಿದ್ದ ಸಾವಿತ್ರಿ ತವರು ಮನೆಗೆ ಹೋಗಿದ್ದಳು.
ಹೆಂಡತಿಯ ತವರು ಮನೆಗೂ ಹೋಗಿ ಮನವೊಲಿಸಲು ಚಂದ್ರಶೇಖರ ಪ್ರಯತ್ನ ಪಟ್ಟಿದ್ದಾನೆ. ಇದು ವಿಫಲವಾದಾಗ ತನ್ನ ಮಗ ಶಿವರಾಜ್ ಹಾಗೂ ಮಗಳು ರೇಣುಕಾಗೆ ಎಗ್​​ರೈಸ್​​ನಲ್ಲಿ ವಿಷ ಹಾಕಿ ನೀಡಿದ್ದಾನೆ. ಇದನ್ನು ತಿಂದ ಮಕ್ಕಳು ಅಸ್ವಸ್ಥರಾಗಿದ್ದು, ಸಾವಿತ್ರಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗ ಮೃತಪಟ್ಟಿದ್ದು, ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಾಳಿಕೋಟೆ ಪೊಲೀಸರು ಆರೋಪಿ ಚಂದ್ರಶೇಖರನನ್ನು ಬಂಧಿಸಿದ್ದಾರೆ. ಸಾಲಬಾಧೆ ತಡೆಯಲಾದರೆ ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement