ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಪರಿಷತ್ ಸದಸ್ಯರು ಪಕ್ಷಬೇಧ ಮರೆತು ಧ್ವನಿ ಎತ್ತಲಿ :ಸ್ವರ್ಣವಲ್ಲೀ ಶ್ರೀಗಳ ಕರೆ

ಯಲ್ಲಾಪುರ: ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಪಕ್ಷಬೇಧ ಮರೆತು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ನಮ್ಮ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಬೇಕು. ಜುಲೈ ತಿಂಗಳ ಅಧಿವೇಶನದಲ್ಲೂ ಈ ಬಗೆಗೆ ಧ್ವನಿ ಎತ್ತಬೇಕು ಎಂದು ಸ್ವರ್ಣವಲ್ಲಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಮಂಚಿಕೇರಿ ಸಮಾಜ ಮಂದಿರದಲ್ಲಿ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಬೇಡ್ತಿ ಮತ್ತು ವರದಾ ನದಿ ಜೋಡಣೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಘನಾಶಿನಿ, ಕಾಳಿ, ಶರಾವತಿ ನದಿಗಳ ಸಂರಕ್ಷಣೆಗೂ ಹೋರಾಟ ಆಗಬೇಕು. ಯಾರಿಗೂ ಅನ್ಯಾಯ ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ ನದಿಗಳು ಹಾಗೂ ನದಿ ಪಾತ್ರಗಳಲ್ಲಿರುವ ಜೀವನ ಹಾಗೂ ಜೀವ ವೈವಿಧ್ಯಗಳನ್ನು ಉಳಿಸುವುದು ನಮ್ಮ ಗುರಿ.
ಯೋಜನೆಯನ್ನು ವಿರೋಧಿಸಲು ಬಲವಾದ ಕಾರಣವಿದೆ. ನಮ್ಮ ಒಂದು ಜಿಲ್ಲೆಗೇ ನೀರು ಸಾಲುತ್ತಿಲ್ಲ, ಿವೆಲ್ಲ ಸಣ್ಣ ಸಣ್ಣ ನದಿಗಳು. ಐದು ಜಿಲ್ಲೆಗೆ ಹೇಗೆ ಸಾಲುತ್ತದೆ. ನಮಗೂ ಲಾಭವಿಲ್ಲದ, ಅವರಿಗೂ ಲಾಭವಿಲ್ಲದ ಈ ಯೋಜನೆಯನ್ನು ಯಾಕೆ ಜಾರಿಗೆ ತರಬೇಕು, ಯೋಜನೆಯ ಜಾರಿಯಿಂದ ಮೀನುಗಾರರಿಗೆ ಹಾಗೂ ನದಿ ಪಾತ್ರದ ಜನಜೀವನಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಯೋಜನೆ ಬೆಂಬಲಿಸುವವರೂ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿದರು. ಜನಾಂದೋಲನ, ಜನಪ್ರತಿನಿಧಿಗಳ ಸಹಕಾರದಿಂದ ರಾಜಕೀಯ ಒತ್ತಡ ಹಾಗೂ ಸಹಕಾರಿ ಸಂಘಗಳಿಂದ ತಮ್ಮ ವ್ಯಾಪ್ತಿಯ ಜನರ ಸಹಿ ಸಂಗ್ರಹ ಅಭಿಯಾನದ ಮೂಲಕ ಯೋಜನೆಯನ್ನು ಬಲವಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.

ಸೋಂದಾ ಜೈನಮಠದ ಶ್ರೀಜಗದ್ಗುರು ಅಕಲಂಕ ಕೇಸರಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಮ್ಮಲ್ಲೇ ನೀರಿನ ಕೊರತೆ ಇರುವಾಗ ಬೇರೆಡೆ ನೀರು ಹರಿಸುವುದು ಕಷ್ಟ. 2000 ಎಕರೆಯಷ್ಟು ಭೂಮಿ ಈ ನದಿ ಜೋಡಣೆ ಯೋಜನೆಯಿಂದ ಹಾಳಾಗುತ್ತದೆ. ಜನಜೀವನದ ಅಸ್ತವ್ಯಸ್ತವಾಗುತ್ತದೆ, ವನ್ಯಜೀವಿಗಳು ಹಾಗೂ ಪರಿಸರ ನಾಶದ ಬಗೆಗೂ ಗಮನ ಹರಿಸಬೇಕು ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಯೋಜನೆಯ ವಿಚಾರದಲ್ಲಿ ಜನರ ಭಾವನೆಯಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸೇರಿ ಯೋಜನೆಯಿಂದಾಗುವ ಪರಿಣಾಮಗಳ ಕುರಿತು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಬದ್ಧರಾಗಿದ್ದಾರೆ. ಅಭಿವೃದ್ಧಿ ಕಾರ್ಯಕ್ಕಾಗಿ ಜಿಲ್ಲೆ ಕಳೆದುಕೊಂಡದ್ದು ಬಹಳಷ್ಟಿದೆ. ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸೂಕ್ಷ್ಮ ಪರಿಸರ ವಲಯದಲ್ಲಿ ಯೋಜನೆ ಜಾರಿಗೆ ತರುವುದು ಸೂಕ್ತವಲ್ಲ. ಇಂತಹ ಯೋಜನೆಗಳಿಂದ ಪರಿಸರಕ್ಕೆ, ರೈತರಿಗೆ, ವನವಾಸಿಗಳಿಗೆ ತೊಂದರೆಯಾಗುತ್ತದೆ. ಇಲ್ಲಿನ ಜಲ, ಅರಣ್ಯ ಸಂರಕ್ಷಣೆಗಾಗಿ ಪಕ್ಷಾತೀತವಾಗಿ ಒಕ್ಕೊರಲಿನ ಹೋರಾಟ ನಡೆಯಬೇಕು. ಯೋಜನೆಯನ್ನು ತಾತ್ವಿಕವಾಗಿ ವಿರೋಧಿಸಿ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 20ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ, ಎರಡು ಚುನಾವಣಾ ಸಮಾವೇಶದಲ್ಲಿ ಭಾಗಿ

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜನ ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದರೆ ಸರ್ಕಾರ ಮಣಿಯಲೇಬೇಕಾಗುತ್ತದೆ. ಎಲ್ಲಾ ಗ್ರಾಮ ಪಂಚಾಯತಗಳು ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆ ಆರಂಭಿಕ ಹಂತದಲ್ಲಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಸಹಿ ಸಂಗ್ರಹ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕು, ಸರ್ಕಾರ ಯೋಜನೆ ಕೈಬಿಡುವಂತಾಗಬೇಕು ಎಂದರು.
ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ತಜ್ಞರಾದ ಡಾ.ಬಾಲಚಂದ್ರ ಸಾಯೀಮನೆ, ರಾಮಕೃಷ್ಣ ದುಂಡಿ, ಶಿವಾನಂದ ಕಳವೆ, ಡಾ.ಜಿ.ವಿ.ಹೆಗಡೆ, ಡಾ.ಕೇಶವ ಕೊರ್ಸೆ, ಶಶಿಭೂಷಣ ಹೆಗಡೆ ಮೊದಲಾದವರಿದ್ದರು. ಎಂ.ಕೆ.ಭಟ್ಟ ಯಡಳ್ಳಿ, ಗಣಪತಿ ಬಿಸ್ಲಕೊಪ್ಪ, ನಾರಾಯಣ ಗಡಿಕೈ ನಿರ್ವಹಿಸಿದರು. ರಾಧಾ ಹೆಗಡೆ ನಿರ್ಣಯ ಮಂಡಿಸಿದರು. ಶಿರಸಿ, ಯಲ್ಲಾಪುರ ಭಾಗದ ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ನಿರ್ಣಯಗಳು:
ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರು. ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಬೇಡ್ತಿ -ವರದಾ ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರಕಾರಕ್ಕೆ ಒತ್ತಡ ಹಾಕಬೇಕು ಎಂದು ಆಗ್ರಹ.
ಬೇಡ್ತಿ-ವರದಾ ನದಿ ಜೋಡಣೆ ಅವ್ಯವಹಾರಿಕ ಹಾಗೂ ಅವೈಜ್ಞಾನಿಕವಾಗಿದೆ. ಅರಣ್ಯ, ವನ್ಯಜೀವಿಗಳಿಗೆ ಆಪತ್ತು ತರಲಿದೆ. ಮಲೆನಾಡಿನ ವನವಾಸಿಗಳು ಮತ್ತು ರೈತರಿಗೆ ಮಾರಕವಾಗಲಿದೆ. ಈ ಕಾರಣಗಳಿಂದ ಬೇಡ್ತಿ ಕಣಿವೆಯ ಜನರು ಇದಕ್ಕೆ 20 ವರ್ಷಗಳಿಂದ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ರದ್ದು ಮಾಡಬೇಕು.
ಕಾಳಿ ಕಣಿವೆಯ ಜನರು ಕಾಳಿ ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಈ ಸಮಾವೇಶ ಅವರ ಬೇಡಿಕೆಗೆ ಬೆಂಬಲ ನೀಡುತ್ತದೆ.
ಎತ್ತಿನಹೊಳೆ ನದಿ ತಿರುವುಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೇಡ್ತಿ, ಅಘನಾಶಿನಿ, ಕಾಳಿ, ಶರಾವತಿ, ಇತ್ಯಾದಿ ನದಿ ತಿರುವು, ನದಿ ಜೋಡಣೆ ಯೋಜನೆಗಳನ್ನು ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಚುನಾವಣೆ ವೇಳೆಯೇ ಬಿಜೆಪಿಗೆ ಗುಡ್‌ಬೈ ಹೇಳಿದ ಸಂಸದ ಕರಡಿ ಸಂಗಣ್ಣ : ಕಾಂಗ್ರೆಸ್‌ ಸೇರ್ಪಡೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement