ಬೆಂಗಳೂರು: ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಿಥಿನ್ ಅವರ ಮೃತದೇಹ ಇಂದು, ಭಾನುವಾರ (ಜೂನ್ 19) ನಗರದ ಕೆ.ಆರ್.ಪುರಂನ ರಾಜಕಾಲುವೆಯಲ್ಲಿ ಪತ್ತೆಯಾಗಿದೆ.
36 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಎಸ್ಡಿಆರ್ಎಫ್ ಸಿಬ್ಬಂದಿ ರಾಜಕಾಲುವೆಯಿಂದ ಶವವನ್ನು ಹೊರತೆಗೆದಿದ್ದಾರೆ. ಕೇಂಬ್ರಿಡ್ಜ್ ಕಾಲೇಜು ಪಕ್ಕದ ರಾಜಕಾಲುವೆಯಲ್ಲಿ ಶವ ಸಿಕ್ಕಿ ಹಾಕಿಕೊಂಡಿತ್ತು. ಘಟನಾ ಸ್ಥಳದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ.
ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಮಿಥಿನ್ ಶುಕ್ರವಾರ ತಡರಾತ್ರಿ 12:30ರ ಸುಮಾರಿಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಮಳೆ ಹಿನ್ನೆಲೆ ಎಸ್ಡಿಆರ್ಎಫ್ ಸಿಬ್ಬಂದಿ ನಿನ್ನೆ ರಾತ್ರಿ ಶೋಧಕಾರ್ಯ ನಿಲ್ಲಿಸಿದ್ದರು. ಇಂದು ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಮುಂದುವರೆಸಿದ್ದರು.
ಮೃತ ಮಿಥುನ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದವರು. ಮಿಥುನ್ ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ ಬಡವಾಣೆಯಲ್ಲಿ ಮಳೆ ನೀರು ಸಂಪೂರ್ಣವಾಗಿ ಅವರಿಸಿದ್ದರಿಂದ ಅವರಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದು, ಅವರ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ತಡರಾತ್ರಿ ಬೈಕ್ ರಕ್ಷಣೆ ಮುಂದಾದಾಗ ಮಿಥುನ್ ಕೂಡ ನೀರಿನ ಜೊತೆ ಕೊಚ್ಚಿಕೊಂಡು ಹೋಗಿದ್ದರು.
ಮೃತ ಯುವ ಇಂಜಿನಿಯರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಇಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ