ಪ್ರೊ. ಮಹೇಶ್ವರಯ್ಯ ಸಂಸ್ಮರಣೆ, ಪ್ರತೀಕ ಗ್ರಂಥ ಬಿಡುಗಡೆ

ಧಾರವಾಡ: ಭಾರತದ ನಿಜವಾದ ಆತ್ಮ ಹಳ್ಳಿಗಳಲ್ಲಿದೆ. ಸರಳ ಸಂಪನ್ನತೆಯ ನೇರವಾದ ಮೇರು ವ್ಯಕ್ತಿತ್ವ ಹೊಂದಿದ ಮಹೇಶ್ವರಯ್ಯ ಅವರು ಹಳ್ಳಿಯ ಆತ್ಮ ತೇಜವನ್ನು ತಮ್ಮ ಉಸಿರಿನಲ್ಲಿ ಅಡಗಿಸಿಕೊಂಡವರಾಗಿದ್ದರು. ಅವರ ಈ ಸರಳ ಸಂಪನ್ನತೆಗೆ ಮೆಚ್ಚಿದ ಸಿದ್ದೇಶ್ವರ ಶ್ರೀಗಳು ವಿಶೇಷವಾಗಿ ವಾಕ್ ಶಕ್ತಿಯನ್ನು ಪ್ರಶಂಸಿಸುತ್ತಿದ್ದರು ಎಂದು ಡಾ.ಬಸವರಾಜ ಸೇಡಂ ಹೇಳಿದರು.
ಶ್ರೀ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆದ ಪ್ರೊ. ಮಹೇಶ್ವರಯ್ಯ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹೇಶ್ವರಯ್ಯ ನಿಷ್ಠಾವಂತ ಕನ್ನಡಿಗ ಹಾಗೂ ಭಾರತೀಯರಾಗಿ ಬದುಕಿದವರು. ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ಪಸರಿಸುತ್ತ ಬದುಕಿದವರು ಎಂದು ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ ತಮ್ಮ ಮತ್ತು ಮಹೇಶ್ವರಯ್ಯ ಅವರೊಂದಿಗಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡರು. ಮೌಲ್ಯಗಳನ್ನು ಹೊಂದಿದ, ಸ್ಪಷ್ಟತೆ ಇದ್ದ, ವೈಚಾರಿಕತೆಯಿದ್ದ, ಧೈರ್ಯದ ನಡೆ-ನುಡಿ ಹೊಂದಿದ್ದ ವ್ಯಕ್ತಿತ್ವದ ಮಹೇಶ್ವರಯ್ಯ ಅವರು ನನ್ನ ಸ್ನೇಹಿತರಾಗಿದ್ದರು ಎಂದು ನೆನೆದರು.
ಮಹೇಶ್ವರಯ್ಯ ಅವರು ವಿಶ್ವವಿದ್ಯಾಲಯಗಳಲ್ಲಿ ಒಂದು ವಿಭಾಗಕ್ಕೆ ಸೀಮಿತವಾಗಿರದೆ ವಿಶ್ವವಿದ್ಯಾಲಯದ ಆಗು ಹೋಗುಗಳ ಬಗ್ಗೆಯೂ ಜವಾಬ್ದಾರಿಯಿತ್ತು ಎಂದು ಹೇಳಿದರು.
ಮಹೇಶ್ವರಯ್ಯ ಅವರ ಶಿಷ್ಯಬಳಗ ಹೊರತಂದ ಪ್ರತೀಕ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ. ನಿರಂಜನ್ ವಾನಳ್ಳಿ ಅವರು, ಪ್ರೊ. ಮಹೇಶ್ವರಯ್ಯ ಪ್ರೀತಿ ಹಾಗೂ ಸ್ನೇಹ, ಅಂತಃಕರಣ ತುಂಬಿದ ಸ್ನೇಹಿತರಾಗಿದ್ದರು ಎಂದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಮಹೇಶ್ವರಯ್ಯ ಅವರ ಕುರಿತಾದ ಪ್ರತೀಕ ಕೃತಿ ಕುರಿತು ಮಾತನಾಡಿದ ಡಾ. ಶಿವಕುಮಾರ ಚಲ್ಯ ಅವರು, ಇದು ನಾಲ್ಕು ಭಾಗಗಳನ್ನು ಹೊಂದಿದ್ದು ಜೀವನದ ವೃತ್ತಾಂತದ ವಿವರಗಳನ್ನು ಹೊಂದಿದ ಉತ್ತಮ ಕೃತಿಯಾಗಿದೆ. ಅನೇಕ ಪ್ರಮುಖರು ಹಾಗೂ ಶಿಷ್ಯಬಳಗ ಮತ್ತು ಕುಟುಂಬ ಸದಸ್ಯರ ಲೇಖನಗಳು ಈ ಕೃತಿಯನ್ನು ಆಪ್ತವಾಗಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಪ್ರೊ. ಮಹೇಶ್ವರಯ್ಯ ಅವರ ಪ್ರಕೃತಿ ಪ್ರೇಮ, ಕ್ರಿಯಾಶೀಲ ವ್ಯಕ್ತಿತ್ವವನ್ನು ಶ್ಲಾಘಿಸಿದರು.
ಡಾ. ಗೀತಾ ವಸಂತ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ. ಮಹೇಶ್ವರಯ್ಯ ಅವರ ಬರಹ ಸೂಕ್ಷ್ಮತೆಗಳು, ಪಾಠದ ಚಿಂತನೆಗಳು, ಸಂಶೋಧನಾ ವಿದ್ಯಾರ್ಥಿಗಳ ಅನುಸಂಧಾನದ ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಈ ಸಂದರ್ಭದಲ್ಲಿ ಕೃತಿಯನ್ನು ಹೊರತಂದ ಡಾ. ಶೈಲಜಾ ಬಾಗೇವಾಡಿ, ಬಾ. ರೇಖಾ ಜೋಗುಳ ಮತ್ತು ಶಿಷ್ಯ ಸಂಪಾದಕ ಮಂಡಳಿಯನ್ನು ಸನ್ಮಾನಿಸಲಾಯಿತು. ಕಿಟೆಲ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರೇಖಾ ಜೋಗುಳ ಸ್ವಾಗತಿಸಿದರು. ಶಾಂತಲಾ ಹೆಗಡೆ ವಂದಿಸಿದರು. ಶಿಷ್ಯರು ಮತ್ತು ತಮಿಳುನಾಡು, ಕೇರಳ, ಆಂಧ್ರಪ್ರದೇಶದಿಂದ ಮಹೇಶ್ವರಯ್ಯ ಅವರ ಅಧ್ಯಾಪಕ ಅಭಿಮಾನಿಗಳ ಬಳಗದವರು ಆಗಮಿಸಿದ್ದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement