ಕರ್ನಾಟಕ ವಿವಿ ವ್ಯಾಪ್ತಿಯ ೧೫೨ ಪದವಿ ಕಾಲೇಜುಗಳಲ್ಲಿ ಜೆ.ಎಸ್.ಎಸ್ ಕಾಲೇಜಿಗೆ ಮಾತ್ರ ನ್ಯಾಕ್‌ನಿಂದ A+ ಗ್ರೇಡ್

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ೧೫೨ ಪದವಿ ಕಾಲೇಜುಗಳಲ್ಲಿ ಜೆ.ಎಸ್.ಎಸ್ ಕಾಲೇಜು ಮಾತ್ರ A+ ಗ್ರೇಡ್ ಪಡೆದಿದೆ ಎಂದು ಜೆಎಸ್‌ಎಸ್‌ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಧಾರವಾಡದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯಕ್ಕೆ ೨೦೧೬ ರಿಂದ ೨೦೨೧ ರವರೆಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನ ವರದಿಯನ್ನಾಧರಿಸಿ, ರಾಷ್ಡ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ ಸಂಸ್ಥೆಯು (ನ್ಯಾಕ್), ಮೌಲ್ಯಮಾಪನ ಮಾಡಿ A+ (CGPA-೩.೩೪) ಗ್ರೇಡನ್ನು ನೀಡಿದೆ. ಕಳೆದ ಮೂರು ಬಾರಿ ಮಹಾವಿದ್ಯಾಲಯವು ಸತತವಾಗಿ “A+ ಗ್ರೇಡನ್ನು ಪಡೆಯುತ್ತ ಬಂದಿದೆ. ಮೊದಲನೆ, ಎರಡನೇ, ಮೂರನೇ ಬಾರಿಯೂ A+ ಗ್ರೇಡನ್ನು ಪಡೆದಿದ್ದು, ನಾಲ್ಕನೇ ಬಾರಿ ಅದಕ್ಕಿಂತ ಹೆಚ್ಚಿನ A+ ಗ್ರೇಡ್‌ (CGPA-೩.೩೪) ಗಳೊಂದಿಗೆ ಪಡೆದು ತನ್ನ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ರಾಷ್ಡ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ (ನ್ಯಾಕ್) ಸಂಸ್ಥೆಯು ಮೂರು ಜನರ ಸಮಿತಿಯನ್ನು ರಚಿಸಿ ಮಹಾವಿದ್ಯಾಲಯಕ್ಕೆ ದಿನಾಂಕ ೧೩.೦೬.೨೦೨೨ ಮತ್ತು ೧೪.೦೬.೨೦೨೨ ರಂದು ಕಳುಹಿಸಲಾಗಿತ್ತು. ಸಮಿತಿಯ ಚೇರಮನ್ನರಾಗಿ ಇಂಫಾಲ(ಮಣಿಪುರ)ದ IIITಯ ನಿರ್ದೇಶಕರಾದ ಪ್ರೊ. ಕೃಷ್ಣನ್ ಭಾಸ್ಕರ ಅವರು, ಸಂಯೋಜಕ ಸದಸ್ಯರಾಗಿ ಆಸ್ಸಾಂನ ಬೋಡೊಲ್ಯಾಂಡ ವಿಶ್ವವಿದ್ಯಾಲಯದ ಪ್ರೊ. ಎಲಿಂಗಬಾಮ್ ನಿಕ್ಸಾನ್ ಸಿಂಗ್ ಅವರು ಹಾಗೂ ಸದಸ್ಯರಾಗಿ ಪಂಜಾಬಿನ ಹೋಷಿಯಾರ್‌ಪುರದ ಸನಾತನ ಧರ್ಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಂದ ಕಿಶೋರ ಅವರು ಆಗಮಿಸಿದ್ದರು.
ಕಳೆದ ಬಾರಿಗಿಂತ ಈ ಬಾರಿ ಉತ್ತಮ ಗ್ರೇಡ್ ಬರಲು ೨೦೧೬ ರಿಂದ ೨೦೨೧ರ ಈ ಐದು ವರ್ಷಗಳ ಅವಧಿಯಲ್ಲಿ;

*ಸಂಸ್ಥೆಯ ೨೪ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು, ೯ ಚಿನ್ನದ ಪದಕ ಪಡೆದಿದ್ದಾರೆ.
* ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ೨೨೪ ಕ್ರೀಡಾ ಸ್ಪರ್ಧೆಗಳಲ್ಲಿ ೪೭೯ ವಿದ್ಯಾರ್ಥಿಗಳು ಭಾಗವಹಿಸಿ ೧೫೮ ಪಾರಿತೋಷಕ ಪದಕಗಳನ್ನು ಪಡೆದಿದ್ದಾರೆ.
* ೧೪೭ ವಿಶ್ವವಿದ್ಯಾಲಯ ಮಟ್ಟದ ಯುನಿವರ್ಸಿಟಿ ಬ್ಲೂ ಗಳಾಗಿ ಆಯ್ಕೆಯಾಗಿದ್ದಾರೆ.
* ಲಲಿತಕಲಾ ಸಂಘದ ವತಿಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದಿದ್ದಾರೆ.
* ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ರವರಿಂದ ಪಡೆದಿದೆ. ಈ ಪ್ರಶಸ್ತಿ ೧ ಲಕ್ಷ ರೂ. ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ.
* ಜೆ.ಎಸ್.ಎಸ್ ನ ಎನ್.ಎಸ್.ಎಸ್ ಅಧಿಕಾರಿಗೆ ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ ಪ್ರಶಸ್ತಿಯೂ ಸಹ ಲಭಿಸಿದೆ.
*ಮಹಾವಿದ್ಯಾಲಯದ ಪ್ರಾಧ್ಯಾಪಕರು ಉತ್ತಮ ರೀತಿಯಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆಗಳಲ್ಲಿ ಭಾಗಿಯಾಗಿದ್ದು, ಪ್ರಾಧ್ಯಾಪಕರು ೧೩೬ ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಹಾಗೂ ೧೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
* ಜೆ.ಎಸ್.ಎಸ್ ನ ಪ್ರಾಧ್ಯಾಪಕರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.
*ಐದು ವರ್ಷಗಳ ಅವಧಿಯಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಶಿಷ್ಯವೇತನಕ್ಕೆ ಭಾಜನರಾಗಿದ್ದಾರೆ.
* ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಿತ INSPIRE Scholarship ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ೮೦,೦೦೦ ರೂ.ಗಳಂತೆ ನೀಡುವ ಶಿಷ್ಯವೇತನದ ಪ್ರಯೋಜನವನ್ನು ಕಾಲೇಜಿನ ಒಟ್ಟು ೦೭ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
* ಆಡಳಿತ ಮಂಡಳಿಯು ಅತ್ಯುತ್ತಮ ಕ್ರಿಡಾ ಪಟುಗಳಿಗೆ, ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕದಡಿಯಲ್ಲಿ ಪ್ರವೇಶ ನೀಡಿವೆ. ಇದರಿಂದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಿದೆ.
* ಪಠ್ಯೇತರ ಜೊತೆಗೆ, ವಿವಿಧ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸಿದ್ದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ.
* ಹಲವಾರು ಕಂಪನಿಯವರು ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿದ್ದಾರೆ.
* ಮಹಾವಿದ್ಯಾಲಯದಲ್ಲಿ ಮೂರು ಸ್ನಾತಕೋತ್ತರ ಕೋರ್ಸುಗಳಾದ ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ ಲಭ್ಯವಿದೆ. ಈ ಸ್ನಾತಕೋತ್ತರ ವಿಭಾಗದಲ್ಲಿ ಈ ಬಾರಿ ಕಾಲೇಜಿಗೆ ರ‍್ಯಾಂಕುಗಳು ಸಹ ಲಭಿಸಿವೆ.
* ಮಹಾವಿದ್ಯಾಲಯವು ಅತ್ಯುತ್ತಮ ಪ್ರಯೋಗಾಲಯಗಳನ್ನು ಹೊಂದಿದೆ. ಅಲ್ಲದೇ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ಗ್ರಂಥಾಲಯ, ಐ.ಸಿ.ಟಿ ಯನ್ನೊಳಗೊಂಡ ಕೊಠಡಿಗಳು, ನಾಲ್ಕು ವಿದ್ಯಾರ್ಥಿನಿಯರ ವಸತಿ ನಿಲಯಗಳು, ಎರಡು ವಿದ್ಯಾರ್ಥಿ ವಸತಿ ನಿಲಯಗಳು, ಎರಡು ಆಟದ ಮೈದಾನಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಜಿಮ್ ಕೇಂದ್ರಗಳು, ಆರೋಗ್ಯ ಕೇಂದ್ರ, ಎರಡು ಬ್ಯಾಂಕ್‌ಗಳು, ಪೋಸ್ಟ್ ಆಫೀಸ್, ಮೂರು ಹವಾನಿಯಂತ್ರಿತ ಸಭಾಭವನಗಳು, ಬಯಲು ರಂಗ ಮಂದಿರಗಳ ಸೌಲಭ್ಯಗಳನ್ನು ಹೊಂದಿದೆ.
* ೨೦೨೨-೨೦೨೩ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಗಣಿತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಾಗಿದೆ.

ಈ ಎಲ್ಲ ಅಂಶಗಳು ಮಹಾವಿದ್ಯಾಲಯಕ್ಕೆ A+ ಗ್ರೇಡ್‌ ಪಡೆಯುವಲ್ಲಿ ಪೂರಕವಾಗಿ ಒದಗಿ ಬಂದಿದೆ ಎಂದು ನ.ವಜ್ರಕುಮಾರ ಅವರು ಮಾಹಿತಿ ನೀಡಿದರು.
ಮಹಾವಿದ್ಯಾಲಯ ನ್ಯಾಕ್ ನ ನಾಲ್ಕನೇ ಆವೃತ್ತಿಯ ಮೌಲ್ಯಮಾಪನದಲ್ಲಿ A+ ಗ್ರೇಡ್‌ ಪಡೆದ ಈ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ ಗೌರವ ಅಧ್ಯಕ್ಷರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು,ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ, ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಪ್ರಾಚಾರ್ಯೆ ಶ್ರೀಮತಿ ಇಂದು ಪಂಡಿತ, ಡಾ. ಸೂರಜ ಜೈನ್ ಅವರು ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದ್ದಾರೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ, ಪ್ರಾಚಾರ್ಯರಾದ ಡಾ. ಇಂದು ಪಂಡಿತ, ಡಾ. ಜಗದೀಶ ಬರಗಿ, ಡಾ. ವೆಂಕಟೇಶ ಮುತಾಲಿಕ್, ಡಾ. ನಾಗಚಂದ್ರ, ಡಾ. ರತ್ನಾ ಐರಸಂಗ, ಡಾ. ಶ್ರೀಧರ, ಡಾ. ಆರ್.ವಿ. ಪಾಟೀಲ, ವಿ.ಎಸ್ ಭೀಮರೆಡ್ಡಿ, ಡಾ. ಶೌಕತಲಿ, ಡಾ. ಆರ್.ಎಂ ಪತ್ತಾರ, ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ ಇದ್ದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement