ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 107ಕ್ಕೆ ಏರಿಕೆ, 45 ಲಕ್ಷ ಸಂತ್ರಸ್ತರ ಪರಿಸ್ಥಿತಿ ಭೀಕರ

ಗುವಾಹತಿ: ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದು, ಮಹಾಮಳೆಗೆ ಮೃತರ ಸಂಖ್ಯೆ 107ಕ್ಕೆ ತಲುಪಿದೆ, ಭೂಕುಸಿತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ.
ಒಟ್ಟು 4,536 ಗ್ರಾಮಗಳು ಇನ್ನೂ ಪ್ರವಾಹದ ನೀರಿನಲ್ಲಿ ತತ್ತರಿಸಿವೆ. ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 10.32 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಾಜ್ಯದ 30 ಜಿಲ್ಲೆಗಳಾದ್ಯಂತ ಪ್ರವಾಹದಿಂದ 45.34 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆ ಮತ್ತು NDRF  ನಿಯೋಜನೆ ಮಾಡಲಾಗಿದೆ. ಎಲ್ಲಾ 30 ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತಗಳು ಸ್ಥಾಪಿಸಿರುವ 759 ಪರಿಹಾರ ಶಿಬಿರಗಳಲ್ಲಿ ಒಟ್ಟು 2.84 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಧುಬ್ರಿ, ಶಿವಸಾಗರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಬ್ರಹ್ಮಪುತ್ರ, ದಿಸಾಂಗ್ ಮತ್ತು ಕೊಪಿಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಏತನ್ಮಧ್ಯೆ, ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್‌ನವರು ಮಕ್ಕಳನ್ನು ಪರಿಹಾರ ಶಿಬಿರದಲ್ಲಿ ಶಾಲಾಪೂರ್ವ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ.

ಕೇಂದ್ರದಿಂದ ಪ್ರವಾಹ ಪರಿಸ್ಥಿತಿಯ ಮಾನಿಟರಿಂಗ್
ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರವು ನಿರಂತರವಾಗಿ ಗಮನಿಸುತ್ತಿದೆ ಮತ್ತು ಸವಾಲನ್ನು ಎದುರಿಸಲು ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಇವೆ. ಅವರು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಮತ್ತು ತೊಂದರೆಗೊಳಗಾದವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಅಸ್ಸಾಂನಲ್ಲಿನ ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಕ್ಷಣಾ ಸೇವೆಗಳನ್ನು ತ್ವರಿತಗೊಳಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಬರಾಕ್ ಕಣಿವೆ ಜಿಲ್ಲೆಗಳಲ್ಲಿ 207 ಸಿಬ್ಬಂದಿಗಳೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಒಟ್ಟು ಎಂಟು ತಂಡಗಳನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ, ಸಿಲ್ಚಾರ್ ಪಟ್ಟಣದಲ್ಲಿ 120 ಸಿಬ್ಬಂದಿ ಮತ್ತು ಒಂಬತ್ತು ದೋಣಿಗಳೊಂದಿಗೆ ಭಾರತೀಯ ಸೇನೆಯ ತಂಡವನ್ನು ನಿಯೋಜಿಸಲಾಗಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಇದಲ್ಲದೆ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿಯನ್ನು ಹೈಸ್ಪೀಡ್ ಬೋಟ್‌ಗಳೊಂದಿಗೆ ಕ್ಯಾಚಾರ್ ಜಿಲ್ಲೆಗೆ ರವಾನಿಸಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ತೀವ್ರ ಪೀಡಿತ ಕ್ಯಾಚಾರ್ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ, ಅವರು ಹಿರಿಯ ಅಧಿಕಾರಿಗಳು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನೊಂದಿಗೆ ಸಭೆ ನಡೆಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಪರಿಶೀಲನೆ ನಡೆಸಿದರು.
ಪ್ರವಾಹವು 173 ರಸ್ತೆಗಳು ಮತ್ತು 20 ಸೇತುವೆಗಳನ್ನು ಹಾನಿಗೊಳಿಸಿದೆ ಮತ್ತು ಬಕ್ಸಾ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ತಲಾ ಎರಡು ಒಡ್ಡುಗಳು ಮುರಿದು ಮೂರು ಹಾನಿಗೊಳಗಾಗಿವೆ. ಈ ಎರಡನೇ ಅಲೆಯ ಪ್ರವಾಹದಲ್ಲಿ 100869.7 ಹೆಕ್ಟೇರ್‌ಗಳ ಬೆಳೆ ಪ್ರದೇಶ ಮತ್ತು 33,77,518 ಪ್ರಾಣಿಗಳು ಹಾನಿಗೊಳಗಾಗಿವೆ ಮತ್ತು ಹಗಲಿನಲ್ಲಿ 84 ಪ್ರಾಣಿಗಳು ಕೊಚ್ಚಿಹೋಗಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement