ಯಾದಗಿರಿ : ದಂಪತಿ ಜಗಳ ಸರಿಮಾಡಲು ಹೋಗಿದ್ದ ಪತ್ನಿಯ ಸಂಬಂಧಿಕರನ್ನೇ ಮನೆಯಲ್ಲಿ ಕೂಡಿಹಾಕಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿ, ಇತರ ಮೂವರು ಗಾಯಗೊಂಡ ಘಟನೆ ನಾರಾಯಣಪುರದ ಛಾಯಾ ಕಾಲೊನಿಯಲ್ಲಿ ಬುಧವಾರ ನಡೆದಿದೆ.
ಆರೋಪಿ ಶರಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ಪತ್ನಿಯಿಂದ ವಿಚ್ಛೇದನಕ್ಕೆ ಕೇಳಿದರೆ ಪತ್ನಿ ಇದಕ್ಕೆ ಒಪ್ಪಿಲ್ಲ. ಇದರಿಂದ ಶರಣಪ್ಪ ಪತ್ನಿಯ ತಂದೆ ಹಾಗೂ ಮೂವರು ಸಂಬಂಧಿಕರಿಗೆ ನ್ಯಾಯ ಪಂಚಾಯಿತಿ ಮಾಡಲು ನಾರಾಯಣಪುರದ ಮನೆಗೆ ಕರೆಸಿಕೊಂಡಿದ್ದಾನೆ. ನಂತರ ಮಾತು ವಿಕೋಪಕ್ಕೆ ಹೋಗಿ ನಾಲ್ವರನ್ನು ಮನೆಯಲ್ಲಿ ಕೂಡಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಾಗಿಲಿಗೆ ಕೀಲಿ ಹಾಕಿ ಹೊರಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶರಣಪ್ಪ ಈರಣ್ಣ ಪತ್ನಿ ಹುಲಿಗೆಮ್ಮ ಜತೆ ಆಗಾಗ ಜಗಳವಾಡುತ್ತಿದ್ದುದರಿಂದ ಹುಲಿಗೆಮ್ಮ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ, ಅಲ್ಲದೆ ಹುಲಿಗೆಮ್ಮ ರಾಯಚೂರು ಜಿಲ್ಲೆಯ ಲಿಂಗಸೂಗೂರು ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿದ್ದಾರೆ ಎಂದು ಹೇಳಲಾಗಿದೆ.
ನಾಲ್ವರಲ್ಲಿ ನಾಗಪ್ಪ ಎನ್ನುವವರು ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ