ನವದೆಹಲಿ: ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೂರದರ್ಶನದಲ್ಲಿ ನೂಪುರ್ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ದೇಶಾದ್ಯಂತ ಕಿಚ್ಚು ಹೊತ್ತಿಸಲು ನೂಪುರ್ ಶರ್ಮಾ ಏಕೈಕ ಕಾರಣವಾಗಿದ್ದು, ಇಡೀ ದೇಶದ ಮುಂದೆ ಆಕೆ ಕ್ಷಮೆಯಾಚಿಸಬೇಕು ಎಂದು ಹೇಳಿತು.
ಅವರ ಸಡಿಲವಾದ ನಾಲಿಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಪೀಠ ಹೇಳಿದೆ.ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ ರೀತಿ ಹಾಗೂ ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಈ ಮಹಿಳೆ ಏಕಾಂಗಿಯಾಗಿ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
“ದೇಶಾದ್ಯಂತ ಆಕೆ ಭಾವನೆಗಳನ್ನು ಪ್ರಚೋದಿಸಿರುವ ರೀತಿಗೆ ಅವರು ಹೊಣೆಗಾರರಾಗಿದ್ದು, ರಾಷ್ಟ್ರದಾದ್ಯಂತ ಆಗುತ್ತಿರುವ ಬೆಳವಣಿಗೆಗಳಿಗೆ ಆಕೆಯೇ ಏಕಮಾತ್ರ ಜವಾಬ್ದಾರಿಯಾಗಿದ್ದಾರೆ. ಚರ್ಚೆಯಲ್ಲಿ ಅವರು ಹೇಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲವನ್ನೂ ಹೇಳಿದ ನಂತರ ತಾನು ಓರ್ವ ವಕೀಲೆ ಎಂದು ಅವರು ಹೇಳಿದ್ದಾರೆ ಎಂಬುದನ್ನು ಕೇಳಿದೆವು. ಇದು ನಾಚಿಕೆಗೇಡು. ಅವರು ಇಡೀ ದೇಶದ ಕ್ಷಮೆ ಕೋರಬೇಕು” ಎಂದು ನ್ಯಾ. ಸೂರ್ಯಕಾಂತ್ ಗಂಭೀರವಾಗಿ ಹೇಳಿದರು.
ಅವರ ಕ್ಷಮೆಯಾಚನೆ ಮತ್ತು ಪ್ರವಾದಿಯ ಮೇಲಿನ ಕಾಮೆಂಟ್ಗಳನ್ನು ಹಿಂತೆಗೆದುಕೊಂಡಿರುವುದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಪೀಠವು ಅದು ತುಂಬಾ ತಡವಾಗಿದೆ ಎಂದು ಹೇಳಿದೆ. “ನೂಪುರ ಶರ್ಮಾ ದೂರಿನ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು, ಆದರೆ ಅನೇಕ ಎಫ್ಐಆರ್ಗಳ ಹೊರತಾಗಿಯೂ, ನೂಪುರ ಶರ್ಮಾ ಅವರನ್ನು ದೆಹಲಿ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ” ಎಂದು ನ್ಯಾಯಾಲಯವು ಆಕ್ಷೇಪಿಸಿತು.
ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆಯೋ ಅಥವಾ ಅವರೇ ಭದ್ರತೆಗೆ ಬೆದರಿಕೆಯಾಗಿದ್ದಾರೆಯೋ? ಅವರು ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ ರೀತಿ. ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಈ ಮಹಿಳೆ ಏಕಾಂಗಿಯಾಗಿ ಜವಾಬ್ದಾರರು” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಪೀಠವು, “ಈ ಅರ್ಜಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಲು ಯೋಗ್ಯವಾಗಿಲ್ಲ ಎಂದು ಅವರು ಭಾವಿಸುವುದನ್ನು ತೋರಿಸುತ್ತದೆ. ವಕ್ತಾರರು ಅಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಕೆಲವೊಮ್ಮೆ ಅಧಿಕಾರವು ಜನರ ತಲೆಗೆ ಹೋಗುತ್ತದೆ ಮತ್ತು ಅವರೇ ಸರ್ವಸ್ವವೆಂದು ಅವರು ಭಾವಿಸುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿತು.
ಶರ್ಮಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು “ಒಂದೇ ಅಪರಾಧಕ್ಕೆ ಹಲವು ಎಫ್ಐಆರ್ ದಾಖಲಿಸಲಾಗದು ಎಂದು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ” ಎಂದರು. ಇದಕ್ಕೆ ಪೂರಕವಾಗಿ ಅವರು ಸುಪ್ರೀಂ ಕೋರ್ಟ್ನ ಅರ್ನಾಬ್ ಗೋಸ್ವಾಮಿ ಮತ್ತು ಟಿ ಟಿ ಆಂಟನಿ ಪ್ರಕರಣವನ್ನು ಉಲ್ಲೇಖಿಸಿದರು.
“ಶರ್ಮಾ ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ. ಚರ್ಚೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬರು ಶಿವಲಿಂಗವು ಕೇವಲ ಕಾರಂಜಿ ಎಂದು ಪದೇಪದೇ ಚರ್ಚೆಯಲ್ಲಿ ಹೇಳುತ್ತಿದ್ದರು. ನಿರೂಪಕರು ಹೀಗೆ ಹೇಳಲಿಲ್ಲ. ಈ ಪರಿಸ್ಥಿತಿ ನಿರ್ಮಾಣವಾದರೆ ಯಾರೊಬ್ಬರಿಗೂ ಮಾತನಾಡುವ ಹಕ್ಕು ಇರುವುದಿಲ್ಲ” ಎಂದರು.
ಆಗ ಪೀಠವು “ಟಿವಿ ಚರ್ಚೆಯಲ್ಲಿ ಪಾಲ್ಗೊಂಡು ದೇಶಾದ್ಯಂತ ಭಾವನೆ ಕೆರಳಿಸುವ ರಾಜಕೀಯ ಪಕ್ಷದ ವಕ್ತಾರರಿಗೆ ಪತ್ರಕರ್ತರ ಸ್ವಾತಂತ್ರ್ಯವನ್ನು ಹೋಲಿಸಲಾಗದು” ಎಂದು ಖಾರವಾಗಿ ನುಡಿಯಿತು. ಹಾಗೂ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ, ಪ್ರಜಾಪ್ರಭುತ್ವದಲ್ಲಿ ಹುಲ್ಲು ಬೆಳೆಯುವ ಹಕ್ಕಿದೆ ಮತ್ತು ಕತ್ತೆಗೆ ತಿನ್ನುವ ಹಕ್ಕಿದೆ” ಎಂದು ನ್ಯಾಯಾಧೀಶರು ಖಾರವಾಗಿ ಉತ್ತರಿಸಿದರು.
ತನ್ನ ಹೇಳಿಕೆಗೆ ಕ್ಷಮೆಯಾಚಿಸಿ ಕಾಮೆಂಟ್ಗಳನ್ನು ಅವರು ಹಿಂತೆಗೆದುಕೊಂಡಿದ್ದಾರೆ ಎಂದು ವಕೀಲ ಸಿಂಗ್ ಹೇಳಿದ್ದಕ್ಕೆ ಸುಪ್ರೀಂ ಪೀಠವು “ಅವರು ಟಿವಿಗೆ ಹೋಗಿ ರಾಷ್ಟ್ರದ ಕ್ಷಮೆ ಕೇಳಬೇಕಿತ್ತು. ಇವರು ಯಾವುದೇ ಧರ್ಮದವರಲ್ಲ, ಅವರು ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ ಅಷ್ಟೆ” ಎಂದು ಉತ್ತರಿಸಿತು.
ಟಿವಿ ಚರ್ಚೆಗೆ ಹೋದಾಗ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದಾಗ ಅದು ಸಮಾಜದ ರಚನೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಯೋಚಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಸುಪ್ರೀಂಕೋರ್ಟ್ ನೂಪುರ ಶರ್ಮಾ ಅವರ ಅರ್ಜಿಯನ್ನು ವಜಾಗೊಳಿಸಿತು ಮತ್ತು “ಯಾವುದೇ ಪರಿಹಾರವನ್ನು ಪಡೆಯಲು ಹೈಕೋರ್ಟ್ ಸಂಪರ್ಕಿಸುವಂತೆ ಸೂಚಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ