ಜಮ್ಮು: ಭಾನುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕರಲ್ಲಿ ಒಬ್ಬನನ್ನು ತಾಲಿಬ್ ಹುಸೇನ್ ಎಂದು ಗುರುತಿಸಲಾಗಿದ್ದು, ಈತ ಬಿಜೆಪಿ ಒಳಗೆ ನುಸುಳಿದ್ದಾನೆ ಮತ್ತು ಈತನನ್ನು ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್ನ ಉಸ್ತುವಾರಿಯನ್ನೂ ಸಹ ಮಾಡಲಾಗಿತ್ತು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆದಾಗ್ಯೂ, ತಾಲಿಬ್ ಹುಸೇನ್ ಕೇವಲ 18 ದಿನಗಳ ಕಾಲ ಪಕ್ಷದ ಸದಸ್ಯನಾಗಿದ್ದ, ಮೇ 27, 2022 ರಂದು ರಾಜೀನಾಮೆ ನೀಡಿದ್ದ ಎಂದು ಬಿಜೆಪಿ ಹೇಳಿದೆ ಎಂದು ವರದಿಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಟಕ್ಸನ್ ಧೋಕ್ ಗ್ರಾಮದ ನಿವಾಸಿಗಳ ಸಹಾಯದಿಂದ ಬಾರಾಮುಲ್ಲಾದ ಫೈಝಲ್ ಅಹ್ಮದ್ ದಾರ್ ಮತ್ತು ರಾಜೌರಿಯ ತಾಲಿಬ್ ಹುಸೇನ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರಿಂದ ಎರಡು ಎಕೆ ರೈಫಲ್ಗಳು, ಏಳು ಗ್ರೆನೇಡ್ಗಳು ಮತ್ತು ಪಿಸ್ತೂಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಗ್ರರನ್ನು ಸದೆಬಡಿಯುವ ಗ್ರಾಮಸ್ಥರಿಗೆ ಡಿಜಿಪಿ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಬಂಧಿಸುವಲ್ಲಿ ಹೆಚ್ಚಿನ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ ಟಕ್ಸನ್ ಧೋಕ್ ಗ್ರಾಮಸ್ಥರಿಗೆ ರೂ 5 ಲಕ್ಷ ನಗದು ಬಹುಮಾನವನ್ನು ಘೋಷಿಸಿದರು.
ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಬಂಧಿಸಿದ ಗ್ರಾಮಸ್ಥರು ರಿಯಾಸಿ ಅವರ ಶೌರ್ಯಕ್ಕೆ ನಾನು ವಂದಿಸುತ್ತೇನೆ. ಅಂತಹ ನಿರ್ಣಯವು ಭಯೋತ್ಪಾದನೆಯ ಅಂತ್ಯ ದೂರವಿಲ್ಲ ಎಂಬುದನ್ನು ತೋರಿಸುತ್ತದೆ. ಯುಟಿ ಸರ್ಕಾರವು ಗ್ರಾಮಸ್ಥರಿಗೆ ರೂ 5 ಲಕ್ಷ ನಗದು ಬಹುಮಾನವನ್ನು ನೀಡುತ್ತದೆ” ಎಂದು ಎಲ್ಜಿ ಸಿನ್ಹಾ ಹೇಳಿದರು.
ಇವರು ಬಿಜೆಪಿಗೆ ಸೇರಿ ಸಂಘಟನೆ ಮಾಡುತ್ತಿದ್ದಾರೆ ಎಂದುಕೊಂಡರೆ ಇವರು, ದೊಡ್ಡ ನಾಯಕರ ಹತ್ಯೆಗೆ ಯೋಜನೆ ರೂಪಿಸುತ್ತಿದ್ದಾರೆ. ಅನೇಕ ವಿಧ್ವಂಸಕ ಕೃತ್ಯಗಳನ್ನು ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಆನ್ಲೈನ್ ವ್ಯವಸ್ಥೆ, ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವವರ ಹಿನ್ನೆಲೆ, ಅಪರಾಧ ದಾಖಲೆಗಳನ್ನು ಪರಿಶೀಲಿಸುತ್ತಿಲ್ಲ. ಇದು ಈ ತರಹದ್ದಕ್ಕೆ ಕಾರಣವಾಗುತ್ತಿದೆ ಎಂದು ಬಿಜೆಪಿ ವಕ್ತಾರ ಆರ್ಎಸ್ ಪಠಾನಿಯಾ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ