ವಾರೆಂಟ್‌ ಜಾರಿಯಾಗಿದ್ದ ವ್ಯಕ್ತಿ ಬಿಟ್ಟು ಮತ್ತೊಬ್ಬರನ್ನು ಬಂಧಿಸಿದ ಪೊಲೀಸರು; ₹5 ಲಕ್ಷ ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು: ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಗೆ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಬಂಧಿಸುವ ಮೂಲಕ ಆ ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಘನತೆಗೆ ಚ್ಯುತಿ ಉಂಟು ಮಾಡಿದ್ದಕ್ಕಾಗಿ ಆ ವ್ಯಕ್ತಿಗೆ ₹5 ಲಕ್ಷ ಪರಿಹಾರವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ.
ಬೆಂಗಳೂರಿನ ಶ್ರೀನಗರದ ನಿವಾಸಿ ಎನ್‌ ನಿಂಗರಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಮಾನ್ಯ ಮಾಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಅರ್ಜಿದಾರರಿಗೆ ನೀಡಲಾಗುವ ₹5 ಲಕ್ಷ ಪರಿಹಾರದ ಮೊತ್ತವನ್ನು ಬಂಧನ ಮಾಡಿದ ಅಧಿಕಾರಿಗಳಿಂದ ವಸೂಲಿ ಮಾಡುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಗೊಂದಲವುಂಟಾಗಿ, ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯ ತಂದೆಯ ಹೆಸರು, ಅರ್ಜಿದಾರರ ತಂದೆಯ ಹೆಸರು ಒಂದೇ ಆಗಿದ್ದರಿಂದ ಪೊಲೀಸ್ ಅಧಿಕಾರಿ, ನಿಜವಾಗಿಯೂ ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯನ್ನು ಬಿಟ್ಟು ಮತ್ತೊಬ್ಬರನ್ನು ಬಂಧಿಸಿದ್ದರು.
ತಂದೆ ಹೆಸರು ಒಂದೇ ಇತ್ತು ಎನ್ನುವ ಕಾರಣಕ್ಕೆ ಬಂಧಿಸಬೇಕಾದ ವ್ಯಕ್ತಿಯನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿರುವುದು ಸರಿಯಲ್ಲ. ಪ್ರಾಥಮಿಕವಾಗಿ ಯಾವುದೇ ವ್ಯಕ್ತಿಯನ್ನು ಬಂಧಿಸಬೇಕಾದರೂ ಅತನ ವಿವರಗಳನ್ನು ಪರಿಶೀಲಿಸಬೇಕಲ್ಲವೇ ಎಂದು ಪೀಠವು ಪ್ರಶ್ನಿಸಿದೆ. ಪೊಲೀಸರ ಕ್ರಮದಿಂದ ಬಂಧಿತ ವ್ಯಕ್ತಿಯ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿದೆ” ಎಂದು ಪೀಠ ಹೇಳಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ತಂದೆ ಹೆಸರು ಒಂದೇ ಎಂಬ ಕಾರಣಕ್ಕೆ ಇನ್ನೊಬ್ಬರನ್ನು ಹೇಗೆ ಬಂಧಿಸಲಾಗುತ್ತದೆ ಎಂಬುದು ನನ್ನ ಗ್ರಹಿಕೆಗೆ ನಿಲುಕುತ್ತಿಲ್ಲ ಎಂದು ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ.
ಇಂಥ ಪರಿಸ್ಥಿತಿ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದರೆ ಬಂಧನ ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಇಲ್ಲವಾದಲ್ಲಿ ಬಂಧನ ಪೂರ್ವ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಕುರಿತು ಈ ಆದೇಶ ಸಿಕ್ಕ ನಾಲ್ಕು ವಾರಗಳಲ್ಲಿ ಪೊಲೀಸ್‌ ಮಹಾನಿರ್ದೇಶಕರು ಮಾರ್ಗಸೂಚಿ ಹೊರಡಿಸಬೇಕು. ನ್ಯಾಯಿಕ ರಿಜಿಸ್ಟ್ರಾರ್‌ ಅವರು ತಕ್ಷಣ ಈ ಆದೇಶವನ್ನು ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಿಕೊಡಬೇಕು ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement