ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ-17 ರಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಉರುಳಿ ಬಿದ್ದು ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಕಾಲೇಜ್ ಸರ್ಕಲ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಈ ಟ್ಯಾಂಕರ್ ಹೋಗುತ್ತಿತ್ತು ಎಂದು ಹೇಳಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಹೊನ್ನಾವರ ನಗರದ ಶರಾವತಿ ಸರ್ಕಲ್ ಬಳಿ ಹೆದ್ದಾರಿಯಲ್ಲಿ ಈ ಬೃಹತ್ ಪಲ್ಟಿಯಾಗಿದೆ. ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳ, ಹಾಗೂ ಪೊಲೀಸರು ಆಗಮಿಸಿ ಗ್ಯಾಸ್ ಸೋರಿಕೆಯಾಗದಂತೆ ಹಾಗೂ ಜನರು ಸಂಚರಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡರು.
ರಾಷ್ಟ್ರೀಯ ಹೆದ್ದಾರಿ-17 ಮುಂಬೈ-ತಿರುವಂತಪುರ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ಪೊಲೀಸರು ಮತ್ಯಾವುದೇ ಅನಾಹುತವಾಗದಂತೆ ತಕ್ಷಣವೇ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.
ಭಾರೀ ವಾಹನಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಲಘು ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಅವಕಾಶ ಮಾಡಿಕೊಟ್ಟರು. ಭಟ್ಕಳದಿಂದ ಬರುವ, ಹಾಗೂ ಕುಮಟಾ, ಶಿರಸಿ, ಕಾರವಾರ ಕಡೆಗೆ ತೆರಳುವ ವಾಹನಗಳಿಗೆ ಪಟ್ಟಣದ ಒಳಭಾಗದ ಮಾರ್ಗದಿಂದ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಯಿತು. ಗ್ಯಾಸ್ ಸೋರಿಕೆಯಾಗದ ಕಾರಣ ಪಟ್ಟಣದ ಜನ ನಿಟ್ಟುಸಿರು ಬಿಡುವಂತಾಯಿತು.
ವಾಹನ ದಟ್ಟಣೆ ಇರುವ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಬಳಿ ಪದೇ ಪದೇಪದೇ ಟ್ಯಾಂಕರ್ಗಳು ಉರುಳಿ ಬೀಳುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಬಗ್ಗೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಪರಿಶೀಲಿಸಿ ತಕ್ಷಣವೇ ಸರಿಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ