ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ ಪ್ರಕಟಿಸಿದ್ದಾರೆ.
ಚಾಮರಾಜಪೇಟೆ ಮೈದಾನದ ಸಂಬಂಧ ಕಂದಾಯ ಸಚಿವ ಅಶೋಕ್ ನೇತೃತ್ವದ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಾವ ಸಂಘ-ಸಂಸ್ಥೆಗಳಿಗೂ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಸರ್ಕಾರದಿಂದಲೇ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಸಹಾಯಕ ಆಯುಕ್ತರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ರಾಷ್ಟ್ರಧ್ವಜದ ನೀತಿ ನಿಯಮಗಳಡಿ ಎಲ್ಲರೂ ಭಾಗವಹಿಸಬಹುದು. ವೇದಿಕೆ ಮೇಲೆ ಸಂಘಟನೆಯವರಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಈಗ ಧ್ವಜಾರೋಹಣ ಮಾಡುತ್ತೇವೆ. ಮುಂದೆ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕೊಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಮುಖ್ಯಮಂತ್ರಿಗಳ ಜೊತೆ ಮಾಡಲಾಗುವುದು. ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ನಿಡುವುದರ ಬಗ್ಗೆಯೂ ಚಿಂತಿಸಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.
ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಜಾಗವಾಗಿದೆ. ಹೀಗಾಗಿ ನಮ್ಮ ಇಲಾಖೆಯ ಸುಪರ್ದಿಯಲ್ಲೇ ಆಗಸ್ಟ್ 15ರಂದು ಸಹಾಯಕ ಆಯುಕ್ತರಿಂದಲೇ ಧ್ವಜಾರೋಹಣ ನಡೆಯಲಿದೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರು ಬರಬಹುದು. ಅಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮಾತ್ರ ಕೇಳಿಬರುತ್ತದೆ. ಬೇರೆ ಯಾವುದೇ ಘೋಷಣೆಗೆ ಅವಕಾಶವಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಸಹಾಯಕ ಆಯುಕ್ತರಿಂದ ಧ್ವಜಾರೋಹಣ; ಸಚಿವ ಅಶೋಕ
ನಿಮ್ಮ ಕಾಮೆಂಟ್ ಬರೆಯಿರಿ