ಮೈಸೂರು: ಕರ್ನಾಟಕದ ಮೂರು ಪಕ್ಷದವರೂ ಹೈಕೋರ್ಟ್ ಎಸಿಬಿ ರದ್ದುಪಡಿಸಿದ ತೀರ್ಪನ್ನು ವಿರೋಧಿಸಬಹುದು ಆದರೆ, ಈ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ ಬಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು ಹೀಗಾಗಿ ಹೈಕೋರ್ಟ್ ತೀರ್ಪಿನ ನಂತರ ಎಲ್ಲ ಪಕ್ಷಗಳ ಭ್ರಷ್ಟಾಚಾರಿಗಳಿಗೆ ನಡುಕ ಬಂದಿದೆ ಎಂದು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿರುವವರ ಭ್ರಷ್ಟಾಚಾರದ ತನಿಖೆಗೆ ಲೋಕಾಯುಕ್ತ ಮುಂದಾಯಿತು. ಈ ಕಾರಣಕ್ಕಾಗಿ ಲೋಕಾಯುಕ್ತ ದುರ್ಬಲಗೊಳಿಸಲು ರಾಜಕೀಯ ನಾಯಕರು ಒಳಒಪ್ಪಂದ ಮಾಡಿಕೊಂಡರು. ಆದರೆ ಈಗ ಹೈಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲಬಂದಿದೆ ಎಂದು ಅವರು ಹೇಳಿದರು.
ಸರ್ಕಾರಿ ಅಧಿಕಾರಿಗಳ ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಅಂದಿನ ಬ್ರಿಟಿಷರು ತಮ್ಮ ಪ್ರಾಬಲ್ಯಕ್ಕೆ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ನಮ್ಮದೇ ಸರ್ಕಾರ ಇರುವಾಗ ಸರ್ಕಾರದ ಅನುಮತಿ ಯಾಕೆ ಬೇಕು.?
ಸಾಮಾನ್ಯ ಜನರನ್ನ ನೇರವಾಗಿ ತನಿಖೆ ಮಾಡುತ್ತಾರೆ. ಆದರೆ ಅಧಿಕಾರಿಗಳನ್ನ ತನಿಖೆ ಮಾಡಬೇಕಾದರೆ ಮಾತ್ರ ಸರ್ಕಾರದ ಅನುಮತಿ ಏಕೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಗ್ಡೆ ಪ್ರಶ್ನಿಸಿದರು.
ಎಸಿಬಿ ರಚನೆಯಾದ ಬಳಿಕ ಯಾವೊಬ್ಬ ರಾಜಕಾರಣಿ ಹಾಗೂ ಅಧಿಕಾರಿಯ ಮೇಲೆ ಕ್ರಮ ಜರುಗಿಸರಲಿಲ್ಲ. ಲೋಕಾಯುಕ್ತಕ್ಕೆ ಸ್ವತಂತ್ರ ಹಾಗೂ ಸ್ವಾಯತ್ತ ಅಧಿಕಾರ ಹಾಗೂ ಸವಲತ್ತುಗಳನ್ನ ನೀಡುವ ಮೂಲಕ ಲೋಕಾಯುಕ್ತವನ್ನ ಬಲ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಅಧಿಕಾರಕ್ಕೆ 24 ತಾಸುಗಳಲ್ಲಿ ಎಸಿಬಿಯನ್ನು ರದ್ದುಪಡಿಸುವದಾಗಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೇಳಿತ್ತು. ಆದರೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆ ಎಂದು ಸಂತೋಷ ಹೆಗ್ಡೆ ಹೇಳಿದರು.
ಎಸಿಬಿಯಲ್ಲಿ ಈವರಗೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಆದರೆ ಯಾರಿಗೂ ಶಿಕ್ಷೆ ಆಗಿಲ್ಲ ಎಂಬುದೇ ಬೇಸರದ ಸಂಗತಿ. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷಯೇ ಆಗಿಲ್ಲ. ಮಂತ್ರಿ ಇರಲಿ ಒಬ್ಬ ಶಾಸಕನನ್ನು ಕೂಡ ಎಸಿಬಿ ವಿಚಾರಣೆ ಮಾಡಿಲ್ಲ. ನಮ್ಮ ನಿಮ್ಮಂತವರು ತಪ್ಪು ಮಾಡಿದರೆ ಹೇಗೆ ನಡೆದುಕೊಳ್ಳತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಈಗ ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟಾಚಾರಿಗಳಿಗೆ ಜೈಕಾರ ಹಾಕುತ್ತಾರೆ. ವಿಮಾನ ನಿಲ್ದಾಣಕ್ಕೆ ಹೊರಗೆ ಹೋಗಿ ಸ್ವಾಗತ ಕೋರುತ್ತಾರೆ. ಸದ್ಯ ಜನರ ಮನಃಸ್ಥಿತಿ ಹೇಗೆ ಬದಲಾಗಿದೆಯೆಂದರೆ ಅಧಿಕಾರದ ಹಿಂದೆ ಸಾಗಿ ಹಣಕ್ಕಾಗಿ ಹಂಬಲಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ