ಪಾಟ್ನಾ: ಬಿಹಾರದ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿ) ದಾಳಿ ನಡೆಸಿದ ನಂತರ 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆಯ ಕಿಶನ್ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್ ಅವರಿಗೆ ಸಂಬಂಧಿಸಿದ ಬಿಹಾರದ ಪಾಟ್ನಾ ಮತ್ತು ಕಿಶನ್ಗಂಜ್ನಲ್ಲಿ ವಿಐಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.
ವಿಜಿಲೆನ್ಸ್ ಅಧಿಕಾರಿಗಳು ರಾಯ್ ಅವರ ಕಿಶನ್ಗಂಜ್ ಮನೆಗೆ ಆಗಮಿಸಿದಾಗ, ಅವರು ಕಿಕ್ಬ್ಯಾಕ್ನಂತೆ ಪಡೆದ ಹಣವನ್ನು ತಮ್ಮ ಕೆಳಗೆ ಕೆಲಸ ಮಾಡುವ ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್ನ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿದುಕೊಂಡರು. ಇದರ ಬೆನ್ನಲ್ಲೇ ಅಧೀನ ಅಧಿಕಾರಿಗಳ ಮನೆ ಮೇಲೆಯೂ ದಾಳಿ ನಡೆಸಿವೆ. ಪಾಟ್ನಾ, ಕಿಶನ್ಗಂಜ್ ಸೇರಿ 3 – 4 ಸ್ಥಳಗಳಲ್ಲಿ ವಿಚಕ್ಷಣಾ ದಳ ಅಧಿಕಾರಿಗಳು ಪರಿಶಿಲನೆ ನಡೆಸಿದ್ದು, ಶೋಧ ಕಾರ್ಯಾಚರಣೆ ವೇಳೆ ಸಿಕಿದ ಹಣ ನೋಡಿ ವಿಚಕ್ಷಣಾದಳದ ಅಧಿಕಾರಿಗಳೇ ಹೌಹಾರಿದ್ದಾರೆ.
ನಗದಿನ ಜತೆಗೆ ಕೆಲವು ದಾಖಲೆಗಳು ಹಾಗೂ ಒಡವೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ವಿಚಕ್ಷಣಾ ಇಲಾಖೆ ಶನಿವಾರ ಮಾಹಿತಿ ನೀಡಿದೆ. ನಗದು ಹಣವನ್ನು ಎಣಿಸಲು ಕೌಂಟಿಂಗ್ ಮಷಿನ್ ತರಲಾಯಿತು ಎಂದು ವಿಚಕ್ಷಣಾ ಇಲಾಖೆಯ ಪಾಟ್ನಾದ ಡಿಎಸ್ಪಿ ಸುಜಿತ್ ಸಾಗರ್ ಮಾಹಿತಿ ನೀಡಿದ್ದಾರೆ. ಆರೋಪಿ ಎಕ್ಸಿಕ್ಯುಟಿವ್ ಎಂಜಿನಿಯರ್ ವಿರುದ್ಧ ತನಿಖೆ ನಡೆದಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಿರಿಯ ಎಂಜಿನಿಯರ್ ಹಾಗೂ ಕ್ಯಾಶಿಯರ್ಗಳ ವಿರುದ್ಧ ಲಂಚ ಪಡೆದ ಆರೋಪದ ಹಿನ್ನೆಲೆ ವಿಚಕ್ಷಣಾ ಇಲಾಖೆ ಸಂಜಯ್ ಕುಮಾರ್ ರಾಯ್ ಅವರ ನಿವಾಸ ಹಾಗೂ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಅವರ ಪಾಟ್ನಾದ ಇಂದ್ರಪುರಿ ರಸ್ತೆಯ ನಂ. 10 ನಿವಾಸದ ಮೇಲೆ ವಿಚಕ್ಷಣಾ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ ಬಳಿಕ ಸುಮಾರು 1 ಕೋಟಿ ರೂ. ನಗದು ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ತನಿಖಾ ತಂಡ ನೋಟುಗಳನ್ನು ಹೊಂದಾಣಿಕೆ ಮಾಡಲು ಆರಂಭಿಸಿದ್ದು, ರೇಡ್ನಲ್ಲಿ ಇನ್ನೂ ಹಲವು ದಾಖಲೆಗಳು ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ರೇಡ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಪಾಟ್ನಾದ ವಿಚಕ್ಷಣಾ ದಳ, ಡಿಎಸ್ಪಿ, ಸುಜಿತ್ ಸಾಗರ್ ಪ್ರಕಾರ, ಸಂಜಯ್ ಕುಮಾರ್ ರಾಯ್ ಅವರನ್ನು ಒಳಗೊಂಡ ಲಂಚಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಹಲವಾರು ದಾಳಿಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಹಲವಾರು ದಾಳಿಗಳಲ್ಲಿ 4 ಕೋಟಿ ರೂ. ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ ಎಂದೂ ಪಾಟ್ನಾದ ವಿಚಕ್ಷಣಾ ದಳ, ಡಿಎಸ್ಪಿ, ಸುಜಿತ್ ಸಾಗರ್ ಮಾಹಿತಿ ನೀಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ವಿರುದ್ಧ ಕೇಸ್ ದಾಖಲಿಸುವ ಮೊದಲು ಈ ಎಲ್ಲ ರೇಡ್ಗಳು ನಡೆದಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ