ಬೆಂಗಳೂರು ಚಾಮರಾಜಪೇಟೆ ಮೈದಾನ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ವಕ್ಫ ಮಂಡಳಿ

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್‌ 30) ವಿಚಾರಣೆ ನಡೆಸಲಿದೆ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಮುಸ್ಲಿಂ ಸಂಸ್ಥೆಯ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ ಮುಂದೆ ತುರ್ತು ವಿಚಾರಣೆಗೆ ವಿಷಯವನ್ನು ಪ್ರಸ್ತಾಪಿಸಿದರು. ಒಂದು ವೇಳೆ ನಾಳೆ ಮೇಲ್ಮನವಿ ವಿಚಾರಣೆ ನಡೆಯದಿದ್ದರೆ ಅನಗತ್ಯ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.

ಅರ್ಜಿಯಲ್ಲಿನ ದೋಷ ಸರಿಪಡಿಡಿಸಿದ ನಂತರ ನಾಳೆ (ಆಗಸ್ಟ್‌ 30, 2022) ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾ ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠ ಸೂಚಿಸಿತು.
ವಕ್ಫ್ ಬೋರ್ಡ್ ತನ್ನ ಮನವಿಯಲ್ಲಿ, ಈದ್ಗಾ ಮೈದಾನವು ವಕ್ಫ್ ಆಸ್ತಿಯಾಗಿದೆ ಮತ್ತು ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಿಗೆ ತೆರೆಯಬಹುದಾದ ಸಾರ್ವಜನಿಕ ಸ್ಥಳವಲ್ಲ ಎಂದು ಹೇಳಿದೆ.
ಹೈಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಈದ್ಗಾ ಮೈದಾನವನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಸಾರ್ವಜನಿಕ ಆಟದ ಮೈದಾನವಾಗಿ ಬಳಸಬೇಕು. ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಂದು ಮಾತ್ರ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಉಪಯೋಗಿಸಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು.
ಈ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಏಕಸದಸ್ಯ ಪೀಠದ ಆದೇಶ ಮಾರ್ಪಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಜಮೀನಿನ ವ್ಯಾಜ್ಯ ಬಾಕಿ ಇರುವಾಗ ಎಲ್ಲಾ ಬಗೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಕೋರಿರುವ ಅರ್ಜಿಗಳನ್ನು ಸರ್ಕಾರ ಪರಿಗಣಿಸಬಹುದು ಎಂದು ತಿಳಿಸಿತು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಭಾರತೀಯ ಸಮಾಜ ಧಾರ್ಮಿಕ, ಭಾಷಿಕ, ಸ್ಥಳೀಯ ವೈವಿಧ್ಯತೆ ಹೊಂದಿದೆ. ವಿವಿಧ ಸಮುದಾಯಗಳ ನಡುವೆ ಸೋದರತೆಯನ್ನು ನಮ್ಮ ಸಮಾಜ ಪ್ರತಿಪಾದಿಸುತ್ತದೆ. ಧಾರ್ಮಿಕ ಸಹಿಷ್ಣುತೆಯ ತತ್ವ ಭಾರತೀಯ ನಾಗರಿಕತೆಯ ವೈಶಿಷ್ಟ್ಯವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಹೆಸರಿಗೆ ಭೂಮಿಯ ದಾಖಲೆ ನೀಡಲು ನಿರಾಕರಿಸಿದ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್‌ ಮಂಡಳಿ ಮೂಲ ಅರ್ಜಿ ಸಲ್ಲಿಸಿತ್ತು.
ಭೂಮಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸಿ ಮೈಸೂರು ರಾಜ್ಯ ವಕ್ಫ್ ಮಂಡಳಿ 1965ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಆಧಾರದಲ್ಲಿ ಆಸ್ತಿ ಮಂಡಳಿಗೆ ಸೇರಿದೆ ಎಂದು ಅರ್ಜಿದಾರರು ವಾದಿಸಿದ್ದರು. ವಕ್ಫ್ ನ್ಯಾಯಮಂಡಳಿಯು ಈ ಅಧಿಸೂಚನೆಯನ್ನು ಬದಿಗೆ ಸರಿಸುವವರೆಗೂ ಅಧಿಸೂಚನೆಗೆ ಸರ್ಕಾರವು ಬದ್ಧವಾಗಿರಬೇಕಾಗುತ್ತದೆ ಎಂದು ವಾದಿಸಿತ್ತು. ಆದರೆ ರಾಜ್ಯ ಸರ್ಕಾರ ʼಅಧಿಸೂಚನೆ ಯಾರನ್ನೂ ಬದ್ಧವಾಗಿಸುವುದಿಲ್ಲ. ಭೂಮಿಯು ಯಾವುದೇ ವ್ಯಕ್ತಿಗೆ ಸೇರಿರದ ಕಾರಣ ಅದು ಸರ್ಕಾರಕ್ಕೆ ಸೇರಿದ್ದು ಎಂದು ವಾದಿಸಿತ್ತು.
ಈದ್ಗಾ ಮೈದಾನವು ಸರ್ಕಾರಿ ಆಸ್ತಿಯಾಗಿರುವುದರಿಂದ ಗಣೇಶ ಚತುರ್ಥಿ ಆಚರಣೆಗೆ ಕೆಲ ಸಂಘಟನೆಗಳು ಒತ್ತಾಯಿಸಿದ್ದರಿಂದ ವಿವಾದದ ಕೇಂದ್ರಬಿಂದುವಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement