ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಯೋಜನೆ…? : ವರದಿ

ನವದೆಹಲಿ: ಕಾಂಗ್ರೆಸ್‌ ನಾಯಕ ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಸಂಭಾವ್ಯ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಆದರೆ ಅವರಿನ್ನೂ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ತರೂರ್ ಅವರು ಈ ಬಗ್ಗೆ ಮಾನಸಿಕವಾಗಿ ಸಿದ್ಧರಾಗಿಲ್ಲ. ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಸದ ತರೂರ್ ನಿರಾಕರಿಸಿದ್ದಾರೆ. ಮಲಯಾಳಂ ದಿನಪತ್ರಿಕೆ ‘ಮಾತೃಭೂಮಿ’ಯಲ್ಲಿ ಬರೆದಿರುವ ಲೇಖನ ಬರೆದಿರುವ ಅವರು ಅದರಲ್ಲಿ ‘ಮುಕ್ತ ಮತ್ತು ನ್ಯಾಯಸಮ್ಮತ’ ಚುನಾವಣೆಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಒಳಗೆ ಹತ್ತಾರು ಸ್ಥಾನಗಳಿಗೆ ಕೂಡ ಪಕ್ಷವು ಚುನಾವಣೆ ಘೋಷಣೆ ಮಾಡಬೇಕಿತ್ತು ಎಂದು ತರೂರ್ ಲೇಖನದಲ್ಲಿ ಹೇಳಿದ್ದಾರೆ.
ಎಐಸಿಸಿ ಮತ್ತು ಪಿಎಸಿಯಿಂದ ಆಯ್ಕೆಯಾದ ಪಕ್ಷದ ಸದಸ್ಯರಿಗೆ ಈ ಪ್ರಮುಖ ಹುದ್ದೆಗಳಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂದು ನಿರ್ಧರಿಸುವ ಅವಕಾಶ ನೀಡುವುದು, ಇದು ಪಕ್ಷವನ್ನು ಮುನ್ನಡೆಸುವ ವಿಶ್ವಾಸಾರ್ಹ ಶಕ್ತಿಯನ್ನು ನೀಡಲು ಸಹಾಯ ಮಾಡಲಿದೆ” ಎಂದು ತರೂರ್ ಹೇಳಿದ್ದಾರೆ. ಕಾಂಗ್ರೆಸ್‌ಗೆ ಈಗ ಅನಿವಾರ್ಯ ಅಗತ್ಯವಾಗಿರುವ ಪುನಶ್ಚೇತನದ ಕಡೆಗೆ ಹೋಗಲು ಹೊಸ ಅಧ್ಯಕ್ಷರ ಚುನಾವಣೆ ಕೇವಲ ಆರಂಭ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಯು ಇತರೆ ಪ್ರಯೋಜನಾಕಾರಿ ಪರಿಣಾಮಗಳನ್ನು ಕೂಡ ಹೊಂದಿದೆ. ಉದಾಹರಣೆಗೆ, ಇತ್ತೀಚಿನ ಬ್ರಿಟಿಷ್ ಕನ್ಸರ್ವೇಟಿವ್ ಪಾರ್ಟಿ ನಾಯಕತ್ವ ಸ್ಪರ್ಧೆಯ ಕುರಿತು ಜಾಗತಿಕ ಮಟ್ಟದ ಆಸಕ್ತಿಯನ್ನು ಕೆರಳಿಸಿದೆ. 2019ರಲ್ಲಿ ಥೆರೆಸಾ ಮೇ ಅವರನ್ನು ಬದಲಿಸಿ ಬೋರಿಸ್ ಜಾನ್ಸನ್ ನಾಯಕರಾಗಿ ಹೊರಹೊಮ್ಮುವ ಸಂದರ್ಭದಲ್ಲಿ ಕೂಡ ಹತ್ತಾರು ಅಭ್ಯರ್ಥಿಗಳು ಸ್ಪರ್ಧಿಸಿದ್ದ ವಿದ್ಯಮಾನವನ್ನು ನಾವು ಕಂಡಿದ್ದೇವೆ” ಎಂದು ತರೂರ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿಯೂ ಈ ತರಹದ ಸನ್ನಿವೇಶವಿದ್ದು, ಇದು ಕೂಡ ಪಕ್ಷದಲ್ಲಿನ ರಾಷ್ಟ್ರೀಯ ಹಿತಾಸಕ್ತಿಯನ್ನು ಹೆಚ್ಚಿಸಲಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಹೆಚ್ಚಿನ ಮತದಾರರನ್ನು ಸೆಳೆಯಲಿದೆ ಎಂದು ಲೇಖನದಲ್ಲಿ ತಿಳಿಸಿದ್ದಾರೆ. ಪಕ್ಷದ ಸಂಪೂರ್ಣ ಪುನಶ್ಚೇತನದ ಅಗತ್ಯವನ್ನು ಪ್ರತಿಪಾದಿಸಿರುವ ತರೂರ್, ಕಾಂಗ್ರೆಸ್ ಅಧ್ಯಕ್ಷ ಸ್ಥಾನವು ಭರ್ತಿಯಾಗಲೇಬೇಕಾದ ಅಗತ್ಯವಿರುವ ಅತ್ಯಂತ ತುರ್ತು ನಾಯಕತ್ವ ಸ್ಥಾನವಾಗಿದೆ ಎಂದ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದಲ್ಲಿನ ಬಿಕ್ಕಟ್ಟು ಮತ್ತು ರಾಷ್ಟ್ರೀಯ ಚಿತ್ರಣವನ್ನು ಗಮನದಲ್ಲಿಟ್ಟುಕೊಂಡು, ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಹಾಗೂ ಮತದಾರರಲ್ಲಿ ಸ್ಫೂರ್ತಿ ತುಂಬುವ ಎರಡು ಪ್ರಮುಖ ಗುರಿಗಳನ್ನು ಈಡೇರಿಸುವುದು ನಿಸ್ಸಂಶಯವಾಗಿ ಅತ್ಯಂತ ಅಗತ್ಯವಾಗಿದೆ. ಆತ ಅಥವಾ ಆಕೆ, ಪಕ್ಷವನ್ನು ಕಾಡುತ್ತಿರುವ ಸಮಸ್ಯೆಯನ್ನು ಬಗೆಹರಿಯುವ ಯೋಜನೆ ಹೊಂದಿರಬೇಕು. ಭಾರತದ ಕುರಿತಾದ ದೃಷ್ಟಕೋನ ಕೂಡ ಹೊಂದಿರಬೇಕು. ರಾಜಕೀಯ ಪಕ್ಷವು ದೇಶ ಸೇವೆಯ ಸಾಧನವಾಗಿರುತ್ತದೆ. ಅದಕ್ಕೆ ಅಂತ್ಯ ಎಂಬುದು ಇರುವುದಿಲ್ಲ” ಎಂದು ತರೂರ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

ಪಕ್ಷದ ನಾಯಕತ್ವ ಮತ್ತು ಸಂಘಟನೆಯಲ್ಲಿನ ಸಂಪೂರ್ಣ ಬದಲಾವಣೆಗೆ ಆಗ್ರಹಿಸಿ ಎರಡು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ಹಿರಿಯ ನಾಯಕರ ಗುಂಪಿನಲ್ಲಿ ತರೂರ್ ಕೂಡ ಒಬ್ಬರಾಗಿದ್ದಾರೆ.
ಮೌಲ್ಯಯುತ ಸಹೋದ್ಯೋಗಿಗಳ ನಿರ್ಗಮನವು ಸಹಾಯ ಮಾಡುವುದಿಲ್ಲ. ಈ ನಿರ್ಗಮನಗಳಿಗೆ ನಾನು ವೈಯಕ್ತಿಕವಾಗಿ ವಿಷಾದಿಸುತ್ತೇನೆ, ಏಕೆಂದರೆ ಈ ಸ್ನೇಹಿತರು ಪಕ್ಷದಲ್ಲಿ ಉಳಿಯಲು ಮತ್ತು ಅದನ್ನು ಸುಧಾರಿಸಲು ಹೋರಾಡುವುದನ್ನು ಮುಂದುವರಿಸಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
“ಜಿ-23′ ಎಂದು ಕರೆಯಲ್ಪಡುವ ಪತ್ರಕ್ಕೆ ಸಹಿ ಹಾಕಿದವನಾಗಿ, ಇದು ಪಕ್ಷದ ಸದಸ್ಯರು ಮತ್ತು ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸಲು ಬಯಸುವ ಹಿತೈಷಿಗಳಲ್ಲಿ ಹಲವು ತಿಂಗಳುಗಳಿಂದ ಬೆಳೆದ ಕಳವಳವನ್ನು ಪ್ರತಿಬಿಂಬಿಸುತ್ತದೆ ಎಂದು ನಾನು ಹೇಳಲೇಬೇಕು. ಈ ಕಾಳಜಿಗಳು ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ. ಅದರ ಸಿದ್ಧಾಂತ ಅಥವಾ ಮೌಲ್ಯಗಳ ಬಗ್ಗೆಯಲ್ಲ. ಪಕ್ಷವನ್ನು ಬಲಪಡಿಸುವುದು ಮತ್ತು ಪುನರುಜ್ಜೀವನಗೊಳಿಸುವುದು ನಮ್ಮ ಏಕೈಕ ಉದ್ದೇಶವಾಗಿತ್ತು, ಅದನ್ನು ವಿಭಜಿಸುವುದು ಅಥವಾ ದುರ್ಬಲಗೊಳಿಸುವುದು ಅಲ್ಲ ಎಂದು ತರೂರ್ ಬರೆದಿದ್ದಾರೆ.
ಆಂತರಿಕ ಕೋಲಾಹಲವನ್ನು ಎದುರಿಸುತ್ತಿರುವ ಕಾಂಗ್ರೆಸ್ ಭಾನುವಾರ ತನ್ನ ಅಧ್ಯಕ್ಷರ ಚುನಾವಣೆಯನ್ನು ಅಕ್ಟೋಬರ್ 17 ರಂದು ನಡೆಸುವುದಾಗಿ ಘೋಷಿಸಿತು, ದೇಶದಲ್ಲಿ ಇಂತಹ ಪ್ರಜಾಪ್ರಭುತ್ವದ ವ್ಯಾಯಾಮವನ್ನು ಅನುಸರಿಸುವ ಏಕೈಕ ಪಕ್ಷವಾಗಿದೆ ಎಂದು ಅದು ಪ್ರತಿಪಾದಿಸಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement