ಜೈಲಿನಲ್ಲಿ ಮುರುಘಾ ಮಠದ ಶ್ರೀಗಳಿಗೆ ಎದೆನೋವು : ಆಸ್ಪತ್ರೆಗೆ ಸ್ಥಳಾಂತರ

ಚಿತ್ರದುರ್ಗ: ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದು, ಜೈಲಿನಲ್ಲಿ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಮುರುಘಾ ಶ್ರೀಗಳ ಇಸಿಜಿ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಸದ್ಯ ತಪಾಸಣೆಯ ನಂತರ ಮುರುಘಾ ಶರಣರಿಗೆ ವೈದ್ಯರು ಗ್ಲೂಕೋಸ್ ಬಾಟಲ್ ಹಾಕಿದ್ದಾರೆ. ಗ್ಲೂಕೋಸ್ ಮುಗಿಯಲು ಇನ್ನೂ ಅರ್ಧ ಗಂಟೆ ಸಮಯ ಬೇಕಿದೆ. ಗ್ಲೂಕೋಸ್ ಮುಗಿದ ಮೇಲೆ ಹೆಚ್ಚಿನ ಚಿಕಿತ್ಸೆ ಬೇಕೋ? ಬೇಡವೋ? ಎಂಬುದನ್ನು ವೈದ್ಯರು ನಿರ್ಧರಿಸಲಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ಆರೋಪದಡಿ ಬಂಧನ ಭೀತಿಯಲ್ಲಿದ್ದ ಸ್ವಾಮೀಜಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ಸ್ಥಳೀಯ ನ್ಯಾಯಾಲಯ, ಶುಕ್ರವಾರ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶ ನೀಡಿತ್ತು. ಗುರುವಾರ ರಾತ್ರಿ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಅನಿಲ್‌ಕುಮಾರ್‌ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಮುರುಘಾಮಠಕ್ಕೆ ಆಗಮಿಸಿ ಬಂಧನದ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟು ಶ್ರೀಗಳನ್ನು ಬಂಧಿಸಿದ್ದಾರೆ. ನಂತರ ತಡರಾತ್ರಿ ಸುಮಾರು ೨ ಗಂಟೆಗೆ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಅವರಿಗೆ ಹದಿನಾಲ್ಕು ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement