ಮುಂಬೈ: ಭಾನುವಾರ ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿತ್ತು. ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಸೈರಸ್ ಮಿಸ್ತ್ರಿ ಅವರು ಜಹಾಂಗೀರ್ ಪಾಂಡೋಲೆ, ಅನಾಹಿತಾ ಪಾಂಡೋಲೆ ಮತ್ತು ಡೇರಿಯಸ್ ಪಾಂಡೋಲೆ ಅವರೊಂದಿಗೆ ಗುಜರಾತ್ನ ಉದ್ವಾಡದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಮುಂಬೈ ಮೂಲದ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಮರ್ಸಿಡಿಸ್ ಕಾರನ್ನು ಚಲಾಯಿಸುತ್ತಿದ್ದರು.
ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಮಿಸ್ತ್ರಿ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಜಹಾಂಗೀರ್ ಪಾಂಡೋಲೆ ಮೃತಪಟ್ಟದ್ದರೆ, ಅನಾಹಿತಾ ಪಾಂಡೋಲೆ ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರಿಬ್ಬರೂ ಸೀಟ್ ಬೆಲ್ಟ್ ಧರಿಸದ ಕಾರಣ ಕರ್ಟನ್ ಏರ್ಬ್ಯಾಗ್ಗಳು ತೆರೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾರೋತಿ ನಾಕಾದಲ್ಲಿ ಸೂರ್ಯ ನದಿಯ ಸೇತುವೆಯ ಮೇಲೆ ರಾಂಗ್ ಸೈಡ್ನಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು ಎಂದು ಪೊಲೀಸರು ನಿನ್ನೆ ತಿಳಿಸಿದ್ದಾರೆ.
ಘಟನಾ ಸ್ಥಳದ ಬಳಿಯಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪೊಲೀಸರು ವಿಶ್ಲೇಷಿಸುತ್ತಿದ್ದು, ಕಾರಿನಲ್ಲಿ ಯಾವುದೇ ಯಾಂತ್ರಿಕ ದೋಷಗಳಿವೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದಾರೆ. ಕಪ್ಪು ಪೆಟ್ಟಿಗೆಯಂತೆಯೇ ಇರುವ ವಾಹನದಲ್ಲಿ ಜೋಡಿಸಲಾದ ಚಿಪ್ನಿಂದ ಡೇಟಾವನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
ವಿಧಿವಿಜ್ಞಾನ ತಂಡವು ಅಪಘಾತ ಸ್ಥಳದಿಂದ ಮಾದರಿಗಳನ್ನು ಸಹ ಸಂಗ್ರಹಿಸಿದೆ.
ಟಾಟಾ ಸನ್ಸ್ನ ಆರನೇ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಅವರನ್ನು ಅಕ್ಟೋಬರ್ 2016 ರಲ್ಲಿ ಸ್ಥಾನದಿಂದ ಹೊರಹಾಕಲಾಯಿತು. ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ ಅವರು ಡಿಸೆಂಬರ್ 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರು ಪತ್ನಿ ರೋಹಿಕಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಟಾಟಾ ಗ್ರೂಪ್ ಆಫ್ ಕಂಪನಿಗಳ ಮಾಜಿ ಸ್ವತಂತ್ರ ನಿರ್ದೇಶಕ ಡೇರಿಯಸ್ ಪಾಂಡೋಲೆ ಅವರು ಮಿಸ್ತ್ರಿ ಅವರನ್ನು ಕಂಪನಿಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದನ್ನು ವಿರೋಧಿಸಿದ್ದರು. ಅವರು ಸಹ ಮಿಸ್ತ್ರಿ ಜೊತೆಗೆ ಟಾಟಾ ಸಮೂಹವನ್ನು ತೊರೆದರು. ಜಹಾಂಗೀರ್ ಪಾಂಡೋಲೆ ಡೇರಿಯಸ್ ಪಂಡೋಲೆಯ ಸಹೋದರ.
ನಿಮ್ಮ ಕಾಮೆಂಟ್ ಬರೆಯಿರಿ