ಯಶಸ್ವಿನಿ ಯೋಜನೆ ಅಕ್ಟೋಬರ್‌ 2ರಿಂದ ಮರುಜಾರಿ: ಸಚಿವ ಸೋಮಶೇಖರ

ಬೆಂಗಳೂರು: ‘ಯಶಸ್ವಿನಿ’ ಯೋಜನೆಯನ್ನು ಹಾಲಿ ಇರುವ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಿ ಬರುವ ಅಕ್ಟೋಬರ್‌ 2ರಿಂದ ಮರುಜಾರಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ವಿಧಾನ ಪರಿಷತ್ತಿಗೆ ತಿಳಿಸಿದರು.
ಕಾಂಗ್ರೆಸ್‌ನ ಪ್ರಕಾಶ ರಾಥೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ 300 ಕೋಟಿ ರು. ಒದಗಿಸುವುದಾಗಿ ಘೋಷಿಸಲಾಗಿದೆ. ಯೋಜನೆಯಡಿ ಸೇರ್ಪಡೆಯಾಗಲು ಸದಸ್ಯತ್ವದ ಮಾನದಂಡ ರೂಪಿಸಲಾಗುತ್ತಿದೆ. ಹೊಸದಾಗಿ ಯಶಸ್ವಿನಿ ಟ್ರಸ್ಟ್‌ ರಚಿಸುವ ಕಾರ್ಯ, ಯಾವ ಕಾಯಿಲೆಗಳನ್ನು ಈ ಯೋಜನೆಯಡಿ ಅಳವಡಿಸಬೇಕು ಹಾಗೂ ಯಾವ್ಯಾವ ಆಸ್ಪತ್ರೆಗಳನ್ನು ಸೇರ್ಡಡೆ ಮಾಡಬೇಕು ಎಂಬ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಸಹಕಾರಿ ಬ್ಯಾಂಕುಗಳ ಸದಸ್ಯರನ್ನು ಸಹ ಯೋಜನೆಗೆ ಒಳಪಡಿಸುವ ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಯೋಜನೆ ಮರು ಜಾರಿ ಮಾಡುವುದಾಗಿ ಘೋಷಿಸಿ ಆರು ತಿಂಗಳಾದರೂ ಸರ್ಕಾರ ಇನ್ನೂ ಜಾರಿ ಮಾಡಿಲ್ಲ ಎಂದು ರಾಥೋಡ ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ ಇದ್ದ ‘ಯಶಸ್ವಿನಿ’ ಯೋಜನೆಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆ ಒಂದುಗೂಡಿಸಿ ಜಾರಿಗೆ ತರಲು ಯಶಸ್ವಿನಿ ಯೋಜನೆ ಆರೋಗ್ಯ ಇಲಾಖೆಗೆ ವಿಲೀನಗೊಳಿಸಲಾಯಿತು. ಈ ಯೋಜನೆ ಮರು ಜಾರಿಗೆ ತರಬೇಕಾದರೆ ಆರೋಗ್ಯ ಇಲಾಖೆಯಿಂದ ಬೇರ್ಪಡಿಸುವ ಜೊತೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಬೇಕಾಗಿತ್ತು ಎಂದು ಅವರು ಹೇಳಿದರು.
ಈಗ ಎರಡು ಇಲಾಖೆಗಳು ಒಪ್ಪಿಗೆ ನೀಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಿರುವಾಗ ಮತ್ತೊಂದು ಯೋಜನೆ ಜಾರಿಗೆ ತರಬೇಕಾದರೆ ಎಲ್ಲ ರೀತಿಯಿಂದ ಸಮಾಲೋಚಿಸಿ ಜಾರಿಗೆ ತರಬೇಕಾಗುತ್ತದೆ. ಯೋಜನೆ ಜಾರಿ ಸ್ವಲ್ಪ ತಡವಾದರೂ ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇವೆ. ಯೋಜನೆಯ ‘ಲೋಗೋ’ ಸಹ ಘೋಷಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ಪತ್ತೆ ; ಡಿಜಿ ಹಳ್ಳಿ ನಿಷೇಧಿತ ವಲಯವೆಂದು ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement