ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ ನಡೆದ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದೆ ಕೆರೆ, ರಾಜಕಾಲುವೆ ಹಾಗೂ ಬಫರ್ ಝೋನ್ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗುವುದು. ನ್ಯಾಯಾಂಗ ಅಧಿಕಾರಿಯ ನೇತೃತ್ವದಲ್ಲಿ ತಾಂತ್ರಿಕ ಸದಸ್ಯರೊಂದಿಗೆ ತನಿಖಾ ಆಯೋಗ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಕೆರೆ, ರಾಜಕಾಲುವೆ ಒತ್ತುವರಿ ತೆರವು ಮಾಡಬೇಕಿದೆ. ಪ್ರಭಾವಿಗಳೂ ರಾಜಕಾಲುವೆ ಮಾಡುವಾಗ ಒತ್ತಡ ಹೇರುತ್ತಾರೆ. ಈ ಸಲದ ಮಳೆ ಎಲ್ಲರ ಕಣ್ಣು ತೆರೆಸಿದೆ. ಎಲ್ಲೆಲ್ಲಿ ರಾಜಕಾಲುವೆ ಕಿರಿದಾಗಿಸಲಾಗಿದೆ ಅದನ್ನು ಸರಿ ಪಡಿಸಲಾಗುತ್ತದೆ. ಸಣ್ಣ ನಾಲೆಗಳೇ ಕಣ್ಮರೆಯಾಗಿವೆ. ಹೊರ ವಲಯದಲ್ಲಿ ಹೊಸದಾಗಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದರು.
ಇದಕ್ಕಾಗಿ ಬಿಡಿಎ, ಬಿಬಿಎಂಪಿ, ಜಲಮಂಡಳಿ ಒಟ್ಟಾಗಿ ಮಾಸ್ಟರ್ ಯೋಜನೆ ರೂಪಿಸಬೇಕು. ಈಗಿರುವ ಮಾಸ್ಟರ್ ಪ್ಲಾನ್ ಅನ್ನು ರಿ ಮಾಡಲು ನಿರ್ಧರಿಸಲಾಗಿದೆ. ಸರಿಪಡಿಸಲು ಇನ್ನೂ ನಾಲ್ಕೈದು ವರ್ಷ ಬೇಕಾಗಬಹುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೆಲ್ಲ ಅತಿಕ್ರಮಣವಾಗಿದೆ ಎಂದು ಪರಿಶೀಲಿಸಿ ಅದನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದರು.
ಒಟ್ಟು 2,626 ಒತ್ತುವರಿ ಗುರುತಿಸಲಾಗಿದೆ. 2016 ವರೆಗೆ 428 ಒತ್ತುವರಿ ತೆರವು ಮಾಡಲಾಗಿದೆ. 2018 ಬಳಿಕ 1,502 ಒತ್ತುವರಿ ತೆರವು ಮಾಡಲಾಗಿದೆ. ಇನ್ನೂ 602 ಒತ್ತುವರಿ ತೆರವಿಗೆ ಬಾಕಿ ಇದೆ. ಕೋವಿಡ್ ಸಂದರ್ಭ ಒತ್ತುವರಿ ತೆರವು ಮಾಡಬಾರದು ಎಂದು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿ ತಡೆ ತಂದಿದ್ದರು. ಐಟಿ ಬಿಟಿಯವರು ಬೆಂಗಳೂರಿಗೆ ಹೆಸರು ತಂದಿದ್ದಾರೆ. ಅವರು ಸ್ವಂತ ಕಟ್ಟಡದಲ್ಲಿ ಇರುವುದು ಕಡಿಮೆ. ಆದರೆ ಬಿಲ್ಡರುಗಳು ರಾಜಕಾಲುವೆ ಮುಚ್ಚಿ ಐಟಿ ಪಾರ್ಕ್ ಕಟ್ಡಿದ್ದಾರೆ. ಇದನ್ನು ಸರಿಪಡಿಸುತ್ತೇವೆ. ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ