ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಆಭಯಾರಣ್ಯದಿಂದ ಎರಡು ಕಾಡಾನೆಗಳು ಆಹಾರ ಅರಸಿ ಬಂದು ಬಲಿಯಾಗಿವೆ. ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಚೆನ್ನಹಳ್ಳಿಯ ಗ್ರಾಮದ ಆನೆಸರದ ಬಳಿ ವಿದ್ಯುತ್ ಸ್ಪರ್ಶದಿಂದ ಎರಡು ಗಂಡು ಕಾಡಾನೆಗಳು ಮೃತಪಟ್ಟ ಘಟನೆ ನಡೆದಿದೆ.
ಕಾಡು ಹಂದಿಗಳ ಹಾವಳಿಯನ್ನ ತಪ್ಪಿಸಲು ಬೇಲಿಗೆ ವಿದ್ಯುತ್ ತಂತಿ ಕಟ್ಟಿದ ಪರಿಣಾಮ ರಾತ್ರಿ ವೇಳೆಯಲ್ಲಿ ಬಂದ ಕಾಡಾನೆಗಳು ಅದನ್ನು ಸ್ಪರ್ಶಿಸಿ ಸಾವಿಗೀಡಾಗಿವೆ. ಸತ್ತಿರುವ ಆನೆಗಳ ವಯಸ್ಸು ಸುಮಾರು ೧೪ ವರ್ಷ ೧೫ ವರ್ಷ ಎಂದು ಹೇಳಲಾಗಿದೆ. ಭದ್ರಾ ಅಭಯಾರಣ್ಯದಿಂದ ಶೆಟ್ಟಿಹಳ್ಳಿ ಆಭಯಾರಣ್ಯಕ್ಕೆ ಒಟ್ಟು ಏಳು ಆನೆಗಳು ಬಂದಿದ್ದವು.
ಅದರಲ್ಲಿ ಎರಡು ಆನೆಗಳು ಆಹಾರ ಹುಡುಕುತ್ತ ಆನೆಸರ ಬಳಿ ಬಂದಿವೆ. ಚೆನ್ನಹಳ್ಳಿಯ ಚಂದ್ರ ನಾಯ್ಕ ಎಂಬುವರಿಗೆ ಸೇರಿದ ಹೊಲದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಹೊಲದ ಮಾಲೀಕ ಮೇನ್ ಲೈನ್ನಿಂದಲೇ ವಿದ್ಯುತ್ ಹರಿಸಿದ್ದಾನೆ ಎನ್ನಲಾಗಿದೆ. ಕಾಡಾನೆಗಳು ರಾತ್ರಿಯ ವೇಳೆಯಲ್ಲಿ ಬಂದು ವಿದ್ಯುತ್ ಸ್ಪರ್ಶ ದಿಂದ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಇಲಾಖೆ ಎಸಿಎಫ್ ಸುರೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಶವ ಪರೀಕ್ಷೆ ನಡೆಸಿ ವಿದ್ಯುತ್ ಶಾಕ್ ನಿಂದ ಸತ್ತಿದ್ದು ದೃಢಪಟ್ಟಲ್ಲಿ ಭೂ ಮಾಲೀಕನ ವಿರುದ್ಧ ಕೇಸ್ ದಾಖಲಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ