ನವದೆಹಲಿ : ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಳದಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ನಿರುದ್ಯೋಗ ದರವು ಶೇಕಡಾ 6.43 ಕ್ಕೆ ಕುಸಿದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಅಂಕಿಅಂಶಗಳು ತಿಳಿಸಿವೆ.
ಆಗಸ್ಟ್ ತಿಂಗಳಲ್ಲಿ, ಭಾರತದ ನಿರುದ್ಯೋಗ ದರವು ಒಂದು ವರ್ಷದ ಗರಿಷ್ಠ ಮಟ್ಟವಾದ ಶೇಕಡಾ 8.3ಕ್ಕೆ ತಲುಪಿತ್ತು. ಸೆಪ್ಟೆಂಬರ್ನಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಳದೊಂದಿಗೆ ನಿರುದ್ಯೋಗ ದರವು ಗಮನಾರ್ಹವಾಗಿ ಕುಸಿದಿದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ಆಗಸ್ಟ್ನಲ್ಲಿ ಶೇಕಡಾ 7.68 ಇದ್ದಿದ್ದು ಸೆಪ್ಟೆಂಬರ್ಗೆ ಶೇಕಡಾ 5.84ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ ಆಗಸ್ಟ್ ತಿಂಗಳಲ್ಲಿ ಶೇಕಡಾ 9.57 ರಿಂದ ಶೇಕಡಾ 7.70ಕ್ಕೆ ಇಳಿದಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಸುಮಾರು 8 ಮಿಲಿಯನ್ ಹೆಚ್ಚಳದಿಂದ ದೇಶದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿದೆ ಎಂದು ಹೇಳಿದೆ.
ಸಿಎಂಐಇ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ ರಾಜಸ್ಥಾನದಲ್ಲಿ ನಿರುದ್ಯೋಗ ದರವು ಶೇಕಡಾ 23.8 ರಷ್ಟಿದ್ದರೆ, ಜಮ್ಮು ಮತ್ತು ಕಾಶ್ಮೀರ ಶೇಕಡಾ 23.2, ಹರಿಯಾಣ ಶೇಕಡಾ 22.9, ತ್ರಿಪುರಾ ಶೇಕಡಾ 17, ಜಾರ್ಖಂಡ್ ಶೇಕಡಾ 12.2 ಮತ್ತು ಬಿಹಾರದಲ್ಲಿ ಶೇಕಡಾ 11.4 ರಷ್ಟಿದೆ.
ಛತ್ತೀಸ್ಗಡದಲ್ಲಿ ನಿರುದ್ಯೋಗವು ಶೇಕಡಾ 0.1 ರಷ್ಟಿದ್ದರೆ, ಅಸ್ಸಾಂ ಶೇಕಡಾ 0.4, ಉತ್ತರಾಖಂಡ್ ಶೇಕಡಾ 0.5, ಮಧ್ಯಪ್ರದೇಶ ಶೇಕಡಾ 0.9, ಗುಜರಾತ್ ಶೇಕಡಾ 1.6, ಮೇಘಾಲಯ ಶೇಕಡಾ 2.3 ಮತ್ತು ಒಡಿಶಾದಲ್ಲಿ ಶೇಕಡಾ 2.9 ರಷ್ಟಿದೆ.
ಆಗಸ್ಟ್ನಲ್ಲಿ, ಅನಿಯಮಿತ ಮಳೆಯು ಬಿತ್ತನೆಗಳ ಮೇಲೆ ಪರಿಣಾಮ ಬೀರಿದ್ದರಿಂದ ನಿರುದ್ಯೋಗ ದರವು ಒಂದು ವರ್ಷದ ಗರಿಷ್ಠ ಮಟ್ಟಕ್ಕೆ ಏರಿತು, ಇದು ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಉದ್ಯೋಗದ ಮೇಲೆ ಪರಿಣಾಮ ಬೀರಿತು.
ನಿಮ್ಮ ಕಾಮೆಂಟ್ ಬರೆಯಿರಿ