ನವದೆಹಲಿ: ಅನುಕಂಪದ ನೇಮಕಾತಿಗಾಗಿ ತಾನು ತಾಯಿಯ ಮೇಲೆ ಅವಲಂಬಿತೆ ಎಂದು ವಿವಾಹಿತ ಮಗಳು ಹೇಳುವಂತಿಲ್ಲ. ಹೀಗಾಗಿ ಅಂತಹವರು ಅನುಕಂಪ ಆಧಾರಿತ ನೇಮಕಾತಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ
ಅನುಕಂಪದ ಆಧಾರದ ಮೇಲೆ ಪ್ರತಿವಾದಿ ಮಾಧುರಿ ಮಾರುತಿ ವಿಧಾತೆ ಅವರನ್ನು ನೇಮಕ ಮಾಡುವಂತೆ ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎಂ. ಆರ್. ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ವಿಭಾಗೀಯ ಪೀಠ ಇದನ್ನು ಸ್ಪಷ್ಟಪಡಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಕರ್ನಾಟಕದ ಖಜಾನಾ ನಿರ್ದೇಶಕರು ಇನ್ನಿತರರು ಮತ್ತು ವಿ ಸೌಮ್ಯಶ್ರೀ ನಡುವಣ ಪ್ರಕರಣ (2021) ಮತ್ತು ಎನ್ ಸಿ ಸಂತೋಷ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ (2020) ಗಳಲ್ಲಿ ತಾನು ನೀಡಿದ್ದ ತೀರ್ಪನ್ನು ಅವಲಂಬಿಸಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ ಎಂದು ವರದಿ ಹೇಳಿದೆ.
ಮೃತ ಉದ್ಯೋಗಿ ತಾಯಿಯ ಮೇಲೆ ಪ್ರತಿವಾದಿಯು ‘ಅವಲಂಬಿತಳು’ ಎಂದು ಎಂದು ಹೇಳಲಾಗದು; ಒಂದು ವೇಳೆ ಹಾಗಿದ್ದರೂ ಸಹ ಉದ್ಯೋಗಿ ಮೃತಪಟ್ಟು ಹಲವು ವರ್ಷಗಳ ಬಳಿಕ ಪ್ರತಿವಾದಿ ಅನುಕಂಪಾಧಾರಿತ ನೇಮಕಕ್ಕೆ ಅರ್ಹರಾಗುವುದಿಲ್ಲ, ವಿವಾಹಿತ ಮಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಿದರೆ, ಅದು ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿಯ ಧ್ಯೇಯೋದ್ದೇಶಕ್ಕೆ ವಿರುದ್ಧವಾಗುತ್ತದೆ ಎಂದು ಪೀಠ ಹೇಳಿದೆ.
ಮಹಾರಾಷ್ಟ್ರ ಸರ್ಕಾರದಲ್ಲಿ ಗುಮಾಸ್ತ ಹುದ್ದೆಯಲ್ಲಿ ಮಾಧುರಿ ತಂದೆ ಸೇವೆ ಸಲ್ಲಿಸುತ್ತಿದ್ದರು. ಅವರ ಮರಣಾನಂತರ ಮಾಧುರಿ ತಾಯಿಗೆ ಅನುಕಂಪ ಆಧಾರಿತ ನೌಕರಿ ನೀಡಲಾಗಿತ್ತು. ಅವರೂ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದರು. ನಂತರ ಮಾಧುರಿ ಅಕ್ಕ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ವಿವಾಹಿತರಾಗಿದ್ದರಿಂದ ಆಕೆಯ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.ಮಹಾರಾಷ್ಟ್ರ ಸರ್ಕಾರ ಫೆಬ್ರವರಿ 26, 2013 ರಂದು ಹೊರಡಿಸಿದ್ದ ಸುತ್ತೋಲೆಯೊಂದನ್ನು ಆಧರಿಸಿ ಮೃತ ಉದ್ಯೋಗಿಯ ಕಿರಿಯ ವಿವಾಹಿತ ಮಗಳು ಮಾಧುರಿ ಅರ್ಜಿ ಸಲ್ಲಿಸಿದರು.
ಆದರೆ ಕೆಲ ತಿಂಗಳಲ್ಲಿ ಆಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಯಿತು. ಎರಡು ವರ್ಷಗಳ ಬಳಿಕ ಮಾಧುರಿ ನ್ಯಾಯಮಂಡಳಿ ಮೊರೆ ಹೋದರು. ಅಲ್ಲಿ ಅವರ ನೇಮಕಾತಿಗೆ ಹಸಿರು ನಿಶಾನೆ ದೊರೆಯಿತು. ಇದನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ನ್ಯಾಯಮಂಡಳಿ ಆದೇಶ ಎತ್ತಿ ಹಿಡಿದಿದ್ದರಿಂದ ಮಹಾರಾಷ್ಟ್ರ ಸರ್ಕಾರ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು ಎಂದು ಬಾರ್ & ಬೆಂಚ್ ವರದಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ