ಜ್ಞಾನವಾಪಿ ಪ್ರಕರಣ: ಶಿವಲಿಂಗದ ಕಾಲಮಾನದ ವೈಜ್ಞಾನಿಕ ಪರಿಶೀಲನೆ ಮನವಿ ಕುರಿತ ಆದೇಶ ಮುಂದೂಡಿದ ವಾರಾಣಸಿ ನ್ಯಾಯಾಲಯ

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಕೈಗೊಂಡ ವೇಳೆ ಪತ್ತೆಯಾದ ವಸ್ತುವು ಶಿವಲಿಂಗವೋ ಅಥವಾ ಕಾರಂಜಿಯೋ ಎನ್ನುವುದನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವೈಜ್ಞಾನಿಕ ಪರಿಶೀಲನೆ ಕೈಗೊಳ್ಳುವಂತೆ ನಿರ್ದೇಶಿಸಲು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯ ಕುರಿತಾದ ಆದೇಶವನ್ನು ವಾರಾಣಸಿ ನ್ಯಾಯಾಲಯವು ಅಕ್ಟೋಬರ್‌ 11ಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ಜಿಲ್ಲಾ ನ್ಯಾಯಾಧೀಶ ಡಾ. ಎ. ಕೆ. ವಿಶ್ವೇಶ ಅವರು ಮಸೀದಿಯ ಸಮಿತಿಯು ಹಿಂದೂ ಪಕ್ಷಕಾರರ ಕೋರಿಕೆಯ ಸಂಬಂಧ ನ್ಯಾಯಾಲಯವು ಎತ್ತಿರುವ ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡಿದರು.

ಹಿಂದೂ ಪಕ್ಷಕಾರರ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಎರಡು ನಿರ್ದಿಷ್ಟ ಪ್ರಶ್ನೆಗಳನ್ನು ಪಕ್ಷಕಾರರ ಮುಂದಿರಿಸಿದ್ದು, ಇದಕ್ಕೆ ಉತ್ತರಿಸುವಂತೆ ಮಸೀದಿ ಸಮಿತಿಗೆ ಸೂಚಿಸಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಯಿತು ಎನ್ನಲಾದ ಶಿವಲಿಂಗವು ಮೊಕದ್ದಮೆ ನಡೆಯುತ್ತಿರುವ ಆಸ್ತಿಯ ಒಂದು ಭಾಗವಾಗಿದೆಯೇ ಅಥವಾ ಇಲ್ಲವೇ?
ಹಾಗೂ ಆಕ್ಷೇಪಿತ ನಿರ್ಮಿತಿಯ ಕುರಿತು ‘ವೈಜ್ಞಾನಿಕ ತನಿಖೆ’ಗೆ ಆದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಇಲ್ಲವೇ? ಎಂಬ ಎರಡು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ಇದೇ ಪ್ರಶ್ನೆಗಳಿಗೆ ಉತ್ತರವಾಗಿ ಹಿಂದೂ ಪಕ್ಷಕಾರರ ಪರ ವಕೀಲ ವಿಷ್ಣು ಶಂಕರ್ ಜೈನ್‌ ಅವರು ಶುಕ್ರವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಪತ್ತೆಯಾಗಿದೆ ಎನ್ನಲಾದ ಶಿವಲಿಂಗವು ಮೊಕದ್ದಮೆಯ ಹೂಡಲಾಗಿರುವ ಆಸ್ತಿಯ ಭಾಗ ಎಂದು ಅವರು ಮೊದಲನೆಯ ಪ್ರಶ್ನೆಗೆ ಉತ್ತರಿಸಿದರು. ಎರಡನೆಯ ಪ್ರಶ್ನೆಗೆ ಅವರು, 1908ರ ನಾಗರಿಕ ಪ್ರಕ್ರಿಯಾ ಸಂಹಿತೆಯ ನಿಯಮ 10ಎ ಆದೇಶ 26ರ ಅಡಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ಆದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಮಸೀದಿ ಸಮಿತಿಯ ಪ್ರತಿಕ್ರಿಯೆಯನ್ನು ಅಕ್ಟೋಬರ್‌ 11ಕ್ಕೆ ಆಲಿಸಲಿದೆ.
ವಿವಾದಿತ ಸ್ಥಳದಲ್ಲಿ ಪತ್ತೆಯಾದ ಶಿವಲಿಂಗವು ಹಿಂದೂಗಳ ಆರಾಧನೆಯ ವಸ್ತುವಾಗಿದ್ದು ಪ್ರಾಚೀನ ಕಾಲದಿಂದಲೂ ವಿವಾದಿತ ಆವರಣದಲ್ಲಿದೆ ಎಂದು ನಂಬಲಾಗಿದೆ. ಈ ಕುರಿತು ಸಂಪೂರ್ಣ ನ್ಯಾಯಕ್ಕಾಗಿ ಶಿವಲಿಂಗದ ಸ್ವರೂಪ ಮತ್ತು ಕಾಲಮಾನ ಪತ್ತೆ ಮಾಡಲು ಎಎಸ್‌ಐಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಬೇಡಿಕೆಯಾಗಿದೆ.

 

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement