ಬೆಂಗಳೂರು: ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡಹೇಳಿದ್ದಾರೆ. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಜನತಾ ಮಿತ್ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಚೇತರಿಕೆ ಕಂಡ ಬಳಿಕ ಮತ್ತೆ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಿಸಿದ್ದಾರೆ.
ಅನಾರೋಗ್ಯದ ಬಳಿಕ ಇದೇ ಮೊದಲ ಬಾರಿಗೆ ಇಂದು ,ಶನಿವಾರ ದೇವೇಗೌಡರು ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. ಇನ್ನು ನೀವೆಲ್ಲರೂ ಸೇರಿ ಈ ಪಕ್ಷವನ್ನು ಉಳಿಸಬೇಕಿದೆ. ದಯವಿಟ್ಟು ಎಲ್ಲರೂ ಸೇರಿ ಜೆಡಿಎಸ್ ಪಕ್ಷ ಉಳಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ, ನೀವು ಬಂದು ನಾಲ್ಕು ಮಾತಾಡಿ ಎಂದು ಕುಮಾರಸ್ವಾಮಿ ಹೇಳಿದರು. ನನಗೂ ಇಲ್ಲಿ ಬಂದು ನಾಲು ಮಾತನ್ನಾಡಬೇಕು ಎಂಬ ಆಸೆ ಇತ್ತು. ನನ್ನ ಆರೋಗ್ಯ ಇನ್ನೂ ಚೇತರಿಕೆ ಕಾಣಬೇಕು. ಆಗುತ್ತಿದೆ. ಆರೋಗ್ಯ ಚೇತರಿಕೆಯಾದ ನಂತರ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಅವರು ಹೇಳಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕನ್ನಡ ಹಾಗೂ ಕನ್ನಡಿಗರಿಗೆ ಸ್ವಾಭಿಮಾನ ತಂದುಕೊಟ್ಟವರು ದೇವೆಗೌಡರು. ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ಸಮಾವೇಶಕ್ಕೆ ಬಂದು ಅವರು ನಮ್ಮ ಹೋರಾಟಕ್ಕೆ ಸ್ಪೂರ್ತಿ ತುಂಬಿದ್ದಾರೆ ಎಂದರು.
ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ರಾಜ್ಯದ ಜನರಿಗಾಗಿ ಜನತಾ ಜಲಧಾರೆ, ಜನತಾಮಿತ್ರ ಮೊದಲಾದ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ. ಜನತಾ ಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ಬೆಂಗಳೂರಿಗೆ ಶಾಶ್ವತ ಯೋಜನೆಗಳಾಗಿದ್ದವು. ದೇವೆಗೌಡರು ಅಧಿಕಾರದಲ್ಲಿದ್ದಾಗ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಆದರೆ ಇಂದು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನ ಮುಚ್ಚಿದ್ದಾರೆ. ಹೀಗಾಗಿಯೇ ಇಂದು ಅನೇಕ ಬಡಾವಣೆಗಳು ಜಲಾವೃತವಾಗಿ ಜನ ಪರಿತಪಿಸುವ ಪರಿಸ್ಥಿತಿ ಎದುರಾಯಿತು ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ