ಕರ್ನಾಟಕಕ್ಕೆ 2,900 ಕೋಟಿ ರೂ. ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ನವದೆಹಲಿ: ಪರಿಸರಕ್ಕೆ ಹಾನಿ ಉಂಟು ಮಾಡುವ ಘನ ಹಾಗೂ ದ್ರವ್ಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ಕರ್ನಾಟಕ ಸರ್ಕಾರಕ್ಕೆ ಪರಿಸರ ಪರಿಹಾರದಲ್ಲಿ ₹2,900 ಕೋಟಿ ದಂಡ ವಿಧಿಸಿ ಆದೇಶಿಸಿದೆ.
ಕಸ ವಿಲೇವಾರಿಗೆ ಕೈಗೊಂಡ ಉಪಕ್ರಮಗಳ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಎನ್‌ಜಿಟಿಗೆ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದರು. ಈ ವರದಿ ಪರಿಶೀಲಿಸಿದ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯೆಲ್‌, ನ್ಯಾಯಮೂರ್ತಿ ಸುಧೀರ್ ಅಗರವಾಲ್‌, ತಜ್ಞ ಸದಸ್ಯರಾದ ಪ್ರೊ.ಸೆಂಥಿಲ್‌ ವೇಲ್‌, ಡಾ.ಅಫ್ರೋಜ್‌ ಅಹ್ಮದ್‌ ಅವರನ್ನು ಒಳಗೊಂಡ ಪೀಠವು, ‘ದ್ರವ ಹಾಗೂ ಘನ ತ್ಯಾಜ್ಯ ವಿಲೇವಾರಿಯಲ್ಲಿ ಗಣನೀಯ ಸುಧಾರಣೆ ಆಗಿಲ್ಲದ ಕಾರಣ ಪರಿಸರದ ಮೇಲೆ ಭಾರಿ ಹಾನಿ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ 2016ರ ಘನತ್ಯಾಜ್ಯ ನಿಯಮದ (ತಿದ್ದುಪಡಿ) ಪ್ರಕಾರ, ಹಸಿ ಕಸ ವಿಂಗಡಿಸಿ ಗೊಬ್ಬರ ಮಾಡಬೇಕು ಹಾಗೂ ಒಣ ಕಸವನ್ನು ವಿಲೇವಾರಿ ಮಾಡಬೇಕು. ಭೂಭರ್ತಿ ಘಟಕಗಳಿಗೆ ಮಿಶ್ರ ಕಸ ಸಾಗಿಸುವಂತಿಲ್ಲ. ಆದರೆ, ಕರ್ನಾಟಕದಲ್ಲಿ ಈಗಲೂ 191 ಭೂಭರ್ತಿ ಘಟಕಗಳಿದ್ದು, ಪ್ರತಿನಿತ್ಯ ಅಪಾರ ಪ್ರಮಾಣದ ಕಸವನ್ನು ಈ ಘಟಕಗಳಲ್ಲಿ ಸುರಿಯಲಾಗುತ್ತಿದೆ. ಕೊಳಚೆ
ನೀರು ಜಲಮೂಲಗಳಿಗೆ ಸೇರುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಕೈಗೊಂಡ ಉಪಕ್ರಮಗಳು ಸಾಲದು. ತ್ಯಾಜ್ಯ ನೀರುಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ ನಿಗದಿಪಡಿಸಿದ ಗಡುವಿನೊಳಗೆ ಆಗಿಲ್ಲ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

1,427 ದಶಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಣೆ ಆಗುತ್ತಿಲ್ಲ. ಇದಕ್ಕೆ ₹2,856 ಕೋಟಿ ಪರಿಹಾರ ಪಾವತಿಸಬೇಕು. ಭೂಭರ್ತಿ ಘಟಕಗಳಲ್ಲಿ 178.50 ಲಕ್ಷ ಟನ್‌ ಹಳೆಯ ಕಸ ಹಲವು ಸಮಯಗಳಿಂದ ಉಳಿದುಕೊಂಡಿದೆ. ಈ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡದ ಕಾರಣಕ್ಕೆ ₹540 ಕೋಟಿ ಪಾವತಿಸಬೇಕು. ಒಟ್ಟು ಪರಿಹಾರದ ಮೊತ್ತ ₹3,400 ಕೋಟಿ ಆಗಲಿದೆ. ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳದ ಕಾರಣಕ್ಕೆ ₹500 ಕೋಟಿ ಪರಿಹಾರವನ್ನು ಅಕ್ಟೋಬರ್‌ 10ರಂದು ವಿಧಿಸಲಾಗಿದೆ. ಕರ್ನಾಟಕ ಸರ್ಕಾರವು ಎರಡು ತಿಂಗಳೊಳಗೆ ಪ್ರತ್ಯೇಕ ಖಾತೆ ತೆರೆದು ₹2900 ಕೋಟಿಯನ್ನು ಇಡಬೇಕು. ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆ ಮಾಡಬೇಕು. ಈ ಮೊತ್ತವನ್ನು ಕಸದ ವೈಜ್ಞಾನಿಕ ವಿಲೇವಾರಿಗೆ ಬಳಸಿ 6 ತಿಂಗಳಲ್ಲಿ ಪ್ರಗತಿ ತೋರಿಸಬೇಕು ಎಂದು ಪೀಠ ಸೂಚಿಸಿದೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗದ ಬಗ್ಗೆ ಸುಪ್ರೀಂಕೋರ್ಟ್‌ 2014ರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಂಬಂಧ 2017ರಲ್ಲಿ ಆದೇಶ ಹೊರಡಿಸಿತ್ತು. ಹಾಗೂ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವಂತೆ ಎನ್‌ಜಿಟಿಗೆ ಸೂಚಿಸಿತ್ತು. ವೈಜ್ಞಾನಿಕ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹಸಿರು ಪೀಠವು ರಾಜ್ಯ ಸರ್ಕಾರಗಳಿಗೆ ಹಲವು ಗಡುವುಗಳನ್ನು ನೀಡಿತ್ತು.
ಪರಿಸರಕ್ಕೆ ನಿರಂತರ ಹಾನಿ ತಡೆಯಲು, ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲು ಎನ್‌ಜಿಟಿ ಕಾಯ್ದೆಯ ಸೆಕ್ಷನ್ 15 ರ ಅಡಿ ಪರಿಹಾರ ನೀಡುವುದು ಅಗತ್ಯವಾಗಿದೆ ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement