ಶಿವಮೊಗ್ಗ: ಸೋಮವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ಪುನಃ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಕಾರ್ಯಕರ್ತ ಮೃತ ಹರ್ಷನ ಕುಟುಂಬಸ್ಥರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಓರ್ವ ಯುವಕನ ಮೇಲೆಯೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.
ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ನಲ್ಲಿ ಕೂಗುತ್ತಾ ಓಡಾಡುತ್ತಿದ್ದ ಗುಂಪು ಸೀಗೆಹಟ್ಟಿಯ ಹರ್ಷನ ಮನೆ ಬಳಿ ಬೈಕ್ ನಿಲ್ಲಿಸಿ ಹರ್ಷನ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಬೈಕನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರ ಗುಂಪು ದುಷ್ಕರ್ಮಿಗಳನ್ನು ಹಿಂಬಾಲಿಸಿದೆ. ಪರಾರಿಯಾಗುವ ವೇಳೆ ಕಿಡಿಗೇಡಿಗಳು ಭರಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ಹೆಚ್ಚುವರಿ ಸಿಬ್ಬಂದಿಯನ್ನ ಸೀಗೆಹಟ್ಟಿ ಭಾಗದಲ್ಲಿ ನಿಯೋಜಿಸಿದ್ದಾರೆ.
ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್, ಯುವಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಚೇತರಿಸಿಕೊಂಡಿದ್ದಾನೆ. ಬೈಕ್ ನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಘೋಷಣೆಗಳನ್ನ ಕೂಗಿ ವಾಪಸ್ ಮರಳುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ