ಏಳು ಸ್ಥಾನಗಳಿಗೆ ಉಪಚುನಾವಣೆ: 4 ಸ್ಥಾನಗಳಲ್ಲಿ ಬಿಜೆಪಿ ಗೆಲುವು, ತಲಾ ಒಂದರಲ್ಲಿ ಆರ್‌ಜೆಡಿ, ಟಿಆರ್‌ಎಸ್‌, ಉದ್ಧವ ಠಾಕ್ರೆ ಬಣದ ಗೆಲುವು

ನವದೆಹಲಿ: ಇಂದು, ಭಾನುವಾರ ಪ್ರಕಟವಾದ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಉಳಿದ ಮೂರರಲ್ಲಿ ಪ್ರಾದೇಶಿಕ ಪಕ್ಷಗಳು ಜಯಗಳಿಸಿವೆ.
ಉತ್ತರ ಪ್ರದೇಶದ ಗೋಲ ಗೋಕ್ರನಾಥ, ಹರಿಯಾಣದ ಆದಂಪುರ, ಬಿಹಾರದ ಗೋಪಾಲ್‌ಗಂಜ್ ಮತ್ತು ಒಡಿಶಾದ ಧಾಮ್‌ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಹಾರದ ಮೊಕಾಮಾದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಗೆಲುವು ಸಾಧಿಸಿದರೆ ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿಯು ಮುನುಗೋಡೆಯಲ್ಲಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಮುಂಬೈನ ಅಂಧೇರಿ ಪೂರ್ವದಲ್ಲಿ ಗೆಲುವು ಸಾಧಿಸಿದೆ.
ಏಳು ಸ್ಥಾನಗಳಲ್ಲಿ ಈ ಹಿಂದೆ ಬಿಜೆಪಿ ಮೂರು, ಕಾಂಗ್ರೆಸ್ ಎರಡು, ಶಿವಸೇನೆ ಮತ್ತು ಆರ್‌ಜೆಡಿ ತಲಾ ಒಂದು ಕ್ಷೇತ್ರವನ್ನು ಹೊಂದಿತ್ತು. ಎರಡು ಸ್ಥಾನಗಳು ಬಿಹಾರದಲ್ಲಿ ಮತ್ತು ತಲಾ ಒಂದು ಸ್ಥಾನಗಳು ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿದ್ದವು.
ಅಕ್ರಮವಾಗಿ ಬಂದೂಕು ಇಟ್ಟುಕೊಂಡ ಆರೋಪದಡಿ ಅನರ್ಹಗೊಂಡಿದ್ದ ಅನಂತ್ ಸಿಂಗ್ ಅವರ ಪತ್ನಿ ಆರ್‌ಜೆಡಿ ಅಭ್ಯರ್ಥಿ ನೀಲಮ್ ದೇವಿ ಬಿಹಾರದ ಮೊಕಾಮಾದಲ್ಲಿ ಗೆಲುವು ಸಾಧಿಸಿದ್ದಾರೆ.
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ತವರು ಜಿಲ್ಲೆ ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ಅಲ್ಪ ಗೆಲುವು ದಾಖಲಿಸಿದೆ. ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ತ್ಯಜಿಸಿ ಆರ್‌ಜೆಡಿಯೊಂದಿಗೆ ಕೈಜೋಡಿಸಿದ ನಂತರ ಇದು ಬಿಹಾರದಲ್ಲಿ ಮೊದಲ ಚುನಾವಣೆಯಾಗಿದೆ. ಇದರಲ್ಲಿ ಒಂದು ಬಿಜೆಪಿ ಗೆದ್ದರೆ ಮತ್ತೊಂದರಲ್ಲಿ ಆರ್‌ಜೆಡಿ ಗೆಲುವು ಸಾಧಿಸಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಹರಿಯಾಣದಲ್ಲಿ, ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಕುಟುಂಬದ ಹಿಡಿತದ ಕ್ಷೇತ್ರ ಆದಂಪುರದಲ್ಲಿ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಜಯಗಳಿಸಿದರು. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಭವ್ಯ ಅವರ ತಂದೆ ಕುಲದೀಪ್ ಬಿಷ್ಣೋಯ್ ಅವರು ಪಕ್ಷಾಂತರಗೊಂಡಿದ್ದರಿಂದ ಆದಂಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಈ ಉಪಚುನಾವಣೆಗೆ ಕಾರಣವಾಯಿತು. ಅವರು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದರು. ಅವರು ಜಯಭೇರಿ ಸಾಧಿಸಿದರು.
ಉದ್ಧವ್ ಠಾಕ್ರೆ ಬಣ ಇಂದು ತನ್ನ ಮೊದಲ ಚುನಾವಣೆಯಲ್ಲಿ ಗೆದ್ದಿದೆ. ಮುಂಬೈನ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಭ್ಯರ್ಥಿ ರುತುಜಾ ಲಟ್ಕೆ 66,000 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ.

ತೆಲಂಗಾಣದಲ್ಲಿ ಮುನುಗೋಡೆ ಆಡಳಿತಾರೂಢ ಟಿಆರ್‌ಎಸ್ ಪ್ರತಿಸ್ಪರ್ಧಿ ಬಿಜೆಪಿ ವಿರುದ್ಧ 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಕೆಸಿಆರ್‌ಗೆ ಮುನುಗೋಡು ಉಪಚುನಾವಣೆ ಪ್ರತಿಷ್ಠೆಯ ಕದನವಾಗಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಟಿಆರ್‌ಎಸ್‌ ಗೆಲುವು ಸಾಧಿಸಿದೆ.
ಒಡಿಶಾದ ಧಾಮ್‌ನಗರದಲ್ಲಿ ಆಡಳಿತಾರೂಢ ಪ್ರಾದೇಶಿಕ ಪಕ್ಷ ಬಿಜೆಡಿಯನ್ನು ಬಿಜೆಪಿ ಸೋಲಿಸಿದೆ. ಕಳೆದ ಬಾರಿ ಬಿಜೆಪಿ ಈ ಸ್ಥಾನವನ್ನು ಗೆದ್ದಿತ್ತು ಆದರೆ ಶಾಸಕ ಬಿಷ್ಣು ಚರಣ್ ಸೇಥಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಸೇಥಿ ಅವರ ಪುತ್ರ ಸೂರ್ಯಬಂಶಿ ಸೂರಜ್‌ ಗೆದ್ದಿದ್ದಾರೆ.
ಶಾಸಕ ಅರವಿಂದ್ ಗಿರಿ ನಿಧನದ ನಂತರ ತೆರವಾದ ಉತ್ತರ ಪ್ರದೇಶದ ಗೋಲ ಗೋಕರನಾಥ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್ ಸ್ಪರ್ಧೆಯಿಂದ ದೂರ ಉಳಿದಿದ್ದವು, ಇದರ ಪರಿಣಾಮವಾಗಿ ಅರವಿಂದ್ ಗಿರಿ ಅವರ ಪುತ್ರ ಅಮನ್ ಗಿರಿ (ಬಿಜೆಪಿ) ಮತ್ತು ನೇರ ಹೋರಾಟ ಸಮಾಜವಾದಿ ಪಕ್ಷದ ವಿನಯ್ ತಿವಾರಿ ಅವರನ್ನು ಸೋಲಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement