ಅಂಕೋಲಾ: ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ: ರಸ್ತೆಯಲ್ಲಿ ಕುಸಿದುಬಿದ್ದ ಇಬ್ಬರು

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಚಲನಚಿತ್ರವೊಂದರ ಚಿತ್ರೀಕರಣಕ್ಕೆಂದು ಆಗಮಿಸಿದ ತಂಡದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಇಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ನಡೆದಿದೆ.
ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ರಮೇಶ ಮತ್ತು ರಾಮು ಎಂಬವರ ಮೇಲೆ ಜೇನು ನೊಣಗಳು ದಾಳಿ ಮಾಡಿದ್ದು, ಅಸ್ವಸ್ಥಗೊಂಡು ಅವರು ರಸ್ತೆಯಲ್ಲಿ ಕುಸಿದು ಬಿದ್ದಿದ್ದರು.
ಇವರ ಕೈಕಾಲು, ತಲೆ ಸೇರಿದಂತೆ ಅಂಗಾಂಗಗಳ ಮೇಲೆ ಜೇನು ನೊಣಗಳು ತೀವ್ರವಾಗಿ ದಾಳಿ ನಡೆಸಿದೆ.  ನೂರಾರು ಜೇನು ನೊಣಗಳು ಹಾರಾಡುತ್ತಿದ್ದುದರಿಂದ  ಸಹಾಯಕ್ಕೆ ಧಾವಿಸಲು ಯಾರಿಗೂ ಸಾಧ್ಯವಾಗದ ಸಮಯದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ಆಟೋ ರಿಕ್ಷಾ ಚಾಲಕ ಮಹೇಶ ನಾಯ್ಕ ಎಂಬವರು ಚಿನ್ನದಗರಿ ಯುವಕ ಸಂಘಕ್ಕೆ ಮತ್ತು 112 ಸಿಬ್ಬಂದಿಗೆ ಕರೆ ಮಾಡಿ ಸಮಯ ಪ್ರಜ್ಞೆ ತೋರಿದ್ದಾರೆ.

ಸ್ಥಳೀಯರು ಆಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದ ಕಾರಣ ಗೋಕರ್ಣದಿಂದ ಅಂಕೋಲಾ ಕಡೆ ರೋಗಿಯನ್ನು ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ಚಾಲಕ ಗಣೇಶ ನಾಯಕ ಎನ್ನುವವರು ರೋಗಿಯ ಕುಟುಂಬಕ್ಕೆ ಮನವರಿಕೆ ಮಾಡಿ ಓರ್ವನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ಇನ್ನೋರ್ವ ಅಸ್ವಸ್ಥನನ್ನು ಮಹೇಶ ನಾಯ್ಕ ಅವರು ಚಿನ್ನದಗರಿ ಯುವಕ ಸಂಘದ ಸಹಾಯದಲ್ಲಿ ಆಸ್ಪತ್ರೆಗೆ ಸಾಗಿಸಿದರು. ಸಾಮಾಜಿಕ ಕಾರ್ಯಕರ್ತ ಅನೀಲ ಮಹಾಲೆ ಅನಿಲ ಮಹಾಲೆ ಮತ್ತು ಸ್ಥಳೀಯರು, 112 ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವರಿಗೆ ಸಹಕರಿಸಿದರು.
ಸಮಯೋಚಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಜೇನು ಕಡಿತಕ್ಕೊಳಗಾದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ತಾಲೂಕಿನಲ್ಲಿ ಕೆಲವು ದಿನಗಳಿಂದ ಕನ್ನಡ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು ಚಿತ್ರೀಕರಣ ತಂಡದ ಪ್ರಮುಖರಿಗೆ ಈ ಕುರಿತು ಸತೀಶ ಬೊಮ್ಮಿಗುಡಿ ಅವರು ಮಾಹಿತಿ ನೀಡಿ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸುವಂತೆ ಮನವಿ ಮಾಡಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement