ಬೆಂಗಳೂರು: ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬುಧವಾರ ಖಾಸಗಿ ದೂರು ದಾಖಲಾಗಿದೆ.
ವಕೀಲ ದಿಲೀಪಕುಮಾರ ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಿಚಾರಣೆಗೆ ದಾಖಲಿಸಿಕೊಳ್ಳಲು ಬೆಂಗಳೂರಿನ ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎನ್ ಶಿವಕುಮಾರ ಆದೇಶಿಸಿದ್ದು, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದ್ದಾರೆ.
ಶಾಸಕ ಸತೀಶ್ ಜಾರಕಿಹೊಳಿ ಅವರು ದೂರುದಾರರು ಮತ್ತು ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಾನಿ, ಅವಮಾನ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಹಿಂದೂ ಪದದ ಕುರಿತು ಹೇಳಿಕೆ ನೀಡಿದ್ದು, ನಂತರ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ಅಪರಾಧ ಎಸಗಿದ್ದಾರೆ. ಅವರ ಹೇಳಿಕೆಯ ನಂತರ ರಾಜ್ಯದ ವಿವಿಧೆಡೆ ಜನರು ಪ್ರತಿಭಟನೆ ನಡೆಯುತ್ತಿದೆ. ಆರೋಪಿ ಜಾರಕಿಹೊಳಿ ಅವರು ದೊಂಬಿ ನಡೆಸಲು ಪ್ರಚೋದನೆ ನೀಡುವ ಮೂಲಕ ಐಪಿಸಿ ಸೆಕ್ಷನ್ 153ರ (ದೊಂಬಿಗೆ ಪ್ರಚೋದನೆ) ಅಡಿ ಅಪರಾಧ ಎಸಗಿದ್ದಾರೆ” ಎಂದು ದಿಲೀಪಕುಮಾರ ಅವರು ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ