ಶಿವಮೊಗ್ಗ: ಶನಿವಾರ ಶಿವಮೊಗ್ಗದ ಪೆಸಿಟ್ ಎಂಜಿನಿಯರಿಂಗ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಸಾಗರದ ತನ್ಮಯ್ (16 ವರ್ಷ) ಎಂಬ ಹತ್ತನೇ ತರಗತಿ ವಿದ್ಯಾರ್ಥಿ, 165 ಎಸೆತಗಳಗಳಲ್ಲಿ 407 ರನ್ ಚಚ್ಚಿ ಕ್ರಿಕೆಟ್ಲ್ಲಿ ದಾಖಲೆ ಬರೆದಿದ್ದಾನೆ.
ಸಾಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ತನ್ಮಯ್ ಶನಿವಾರ ನಡೆದ ವಲಯ ಮಟ್ಟದ U-16 ಕ್ರಿಕೆಟ್ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾನೆ. ಈ ಲೀಗ್ ಕರ್ನಾಟಕ ಕ್ರಿಕೆಟ್ ಅಕಾಡೆಮಿ(KSCA) ಸುಪರ್ದಿಯಲ್ಲೇ ನಡೆಯುತ್ತದೆ. ಬಾಲಕನ ಸಾಧನೆ ಅಕಾಡೆಮಿಯಲ್ಲಿ ದಾಖಲಾಗಿದೆ.
ಶನಿವಾರ ಕ್ರಿಕೆಟ್ ಕ್ಲಬ್ ಅಫ್ ಸಾಗರ (CCS) ಹಾಗೂ ಎನ್ಟಿಪಿಸಿ (NTPC) ಭದ್ರಾವತಿ ನಡುವೆ ಪಂದ್ಯವಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸಾಗರದ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳಾಗಿ ಅಂಶು ಹಾಗೂ ತನ್ಮಯ್ ಮೈದಾನಕ್ಕಿಳಿದರು. ತನ್ಮಯ್ 165 ಬಾಲ್ ಗಳಿಗೆ 24 ಸಿಕ್ಸರ್ 48 ಬೌಂಡರಿಗಳನ್ನ ಸಿಡಿಸಿ ಒಟ್ಟು 407 ರನ್ ಗಳಿಸಿದರು. ಅಂಶು 127 ರನ್ ಗಳನ್ನು ಗಳಿಸಿದರು. ತನ್ಮಯ್ ಅಬ್ಬರದ ಬ್ಯಾಟಿಂಗ್ನಲ್ಲಿ 24 ಸಿಕ್ಸರ್ ಹಾಗೂ 48 ಬೌಂಡರಿಗಳು ಸೇರಿವೆ.
ಸಾಗರ ತಂಡ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್ಗಳ ಬೃಹತ್ ಮೊತ್ತೆ ಕಲೆ ಹಾಕಿತು. ಎನ್.ಟಿ.ಪಿ.ಸಿ. ಭದ್ರಾವತಿ ದ್ವಿತೀಯ ಇನ್ನಿಂಗ್ಸ್ ಆಡಿ 73 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.ಈ ಪಂದ್ಯ ಮುಗಿಯುತ್ತಿದ್ದಂತೆ ತನ್ಮಯ್ ಸ್ಕೋರ್ ಕಾಡ್ಗಿಚ್ಚಿನಂತೆ ಹರಡಿತ್ತು. ಸದ್ಯ ತನ್ಮಯ್ ಜೂನಿಯರ್ ಸಚಿನ್ ತೆಂಡೂಲ್ಕರ್ ಎಂಬ ಖ್ಯಾತಿ ಒಂದೇ ದಿನದಲ್ಲಿ ಪಡೆದುಕೊಂಡಿದ್ದಾರೆ. ಇಂತಹ ಅಮೋಘ ಸಾಧನೆ ಗೈದ ಮಗನ ಬಗ್ಗೆ ತಂದೆ ಮಂಜುನಾಥ್ ಮಾತನಾಡಿ, ನಾನು ಈ ಪಂದ್ಯಕ್ಕೆ ಹೋಗಲಿಲ್ಲ. ಮಧ್ಯಾಹ್ನ ವಾಟ್ಸ್ ಆ್ಯಪ್ನಲ್ಲಿ ಫೋಟೋ ಮಾಹಿತಿ ಬಂತು. ಆಗ ಈತ ಮಾಡಿದ ಸ್ಕೋರ್ ಬಗ್ಗೆ ಗೊತ್ತಾಯಿತು. ಆತನ ಸಾಧನೆಗೆ ಸಹಕಾರಿಯಾದ ಸಾಗರ ಕ್ರಿಕೆಟ್ ಕ್ಲಬ್ ಹಾಗೂ ಕೋಚ್ ನಾಗೇಂದ್ರ ಪಂಡಿತ್ ಅವರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.
ತನ್ಮಯ್ ಮಾತನಾಡಿ, ದಿನವೂ ಬೆಳಿಗ್ಗೆ ಸಂಜೆ ಎರಡೂ ಹೊತ್ತು ಪ್ರಾಕ್ಟೀಸ್ ಮಾಡುತ್ತೇನೆ. ಇವತ್ತಿನ ಆಟ ಬಹಳ ಖುಷಿ ಆಯ್ತು. ಅಪ್ಪ-ಅಮ್ಮನ ನೆರವು ಕೋಚ್ ನಾಗೇಂದ್ರ ಪಂಡಿತ್ ಅವರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ಭಾರತಕ್ಕೆ ಆಟವಾಡುವ ಬಯಕೆಯಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ