ಕ್ರೈಂ ಡೇಟಾಬೇಸ್ ಮೊಬೈಲ್ ಅಪ್ಲಿಕೇಶನ್ ಮೂಲಕ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ…!

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ 12 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಮೊಬೈಲ್‌ ಆಪ್‌ (Mobile app) ನೆರವಿನಿಂದ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ರಾಮನಗರದ ರಮೇಶ (35) ಎಂಬಾತ ಬಂಧಿತ ಆರೋಪಿ. ಲಾರಿ ಚಾಲಕನಾಗಿರುವ ರಮೇಶ, ಯಶವಂತಪುರ ವ್ಯಾಪ್ತಿಯ ಬಿ. ಕೆ. ನಗರದ 1ನೇ ಮುಖ್ಯ ರಸ್ತೆಯಲ್ಲಿ ನವೆಂಬರ್ 15 ರಂದು ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಪಿಎಸ್‌ಐ ಸಿ. ರಾಜು ನೇತೃತ್ವದ ತಂಡ ಆತನನ್ನು ವಶಕ್ಕೆ ಪಡೆದಿತ್ತು.
ಬಳಿಕ ಕ್ರೈಂ ಆ್ಯಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಸಿಸಿಟಿಎನ್‌ಎಸ್‌) ಸಾಧನದಿಂದ ರಮೇಶ ಬೆರಳು ಮುದ್ರೆ ಪರಿಶೀಲಿಸಿದ್ದಾರೆ. ಈ ವೇಳೆ ಆತನ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿ ಇರುವ ಮಾಹಿತಿ ಅದರಲ್ಲಿ ಸಿಕ್ಕಿದೆ. ಹೀಗಾಗಿ, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ 12 ವರ್ಷಗಳ ಹಿಂದೆ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ವಿಷಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2005ರ ಆಗಸ್ಟ್ 29 ರಂದು ತಿಗಳರ ಪಾಳ್ಯದ ಬಾಲಾಜಿ ನಗರದಲ್ಲಿ ಮನೆಯೊಂದರ ಪೇಂಟಿಂಗ್‌ ಕೆಲಸಕ್ಕೆ ಸ್ನೇಹಿತರ ಜತೆ ಹೋಗಿದ್ದ ವೇಳೆ ಮನೆ ಮಾಲೀಕರ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಅವರನ್ನು ರಮೇಶ ಇತರರು ಕೊಲೆ ಮಾಡಿದ್ದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

ಈ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ರಮೇಶ ನಂತರ ಜಾಮೀನಿನ ಮೇರೆಗೆ ಹೊರಗಡೆ ಬಂದ ನಂತರ 2010ರಿಂದ ಪ್ರಕರಣದ ವಿಚಾರಣಾ ಪ್ರಕ್ರಿಯೆಗಳಿಗೆ ಹಾಜರಾಗದೆ ತಲೆತಪ್ಪಿಸಿಕೊಂಡಿದ್ದ. ತಾವರೆಕೆರೆಯ ತನ್ನ ಮನೆ ಖಾಲಿ ಮಾಡಿ ರಾಮನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ.
ಆರೋಪಿ ರಮೇಶ್‌ ವಿರುದ್ಧ ವಿಚಾರಣಾ ನ್ಯಾಯಾಲಯ ಹಲವು ಬಾರಿ ವಾರೆಂಟ್‌ ಹೊರಡಿಸಿತ್ತು. ಆದರೂ ಹಾಜರಾಗಿರಲಿಲ್ಲ. ಅಂತಿಮವಾಗಿ ಕೋರ್ಟ್‌ 2018ರಲ್ಲಿ ಉದ್ಘೋಷಿತ ಆರೋಪಿ ಎಂದು ಆದೇಶ ಹೊರಡಿಸಿತ್ತು. ಆದರೂ, ಆತ ಆರೋಪಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಲ್ಲಿ ಭಾಗಿಯಾಗಿದ್ದಾಗ ರಮೇಶಗೆ 20 ವರ್ಷ ವಯೋಮಾನದವನಾಗಿದ್ದ. ಈಗ 35 ವರ್ಷವಾಗಿದೆ. ಆತನ ಮುಖ ಚಹರೆ ಬದಲಾಗಿದೆ. ಹೀಗಾಗಿ, ಆತನ ಗುರುತು ಈಗ ಯಾರಿಗೂ ಸಿಗುತ್ತಿರಲಿಲ್ಲ. ಅಂತಿಮವಾಗಿ ಸಿಸಿಟಿಎನ್‌ಎಸ್‌ ತಂತ್ರಜ್ಞಾನದ ಮೂಲಕ ಆತ ಸೆರೆ ಸಿಕ್ಕಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಸಿಟಿಎನ್‌ಎಸ್‌ ಹಾಗೆಂದ್ರು ಏನು..?
ಕೇಂದ್ರ ಗೃಹ ಇಲಾಖೆ ಒದಗಿಸಿರುವ ಸಿಸಿಟಿಎನ್‌ಎಸ್‌ ವ್ಯವಸ್ಥೆಯನ್ನು ನಗರ ಪೊಲೀಸರು ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಇದರಡಿ ಬೆರಳಚ್ಚು ತೆಗೆದುಕೊಳ್ಳುವ ಸಾಧನವನ್ನು ಗಸ್ತು ಪೊಲೀಸರಿಗೆ ಒದಗಿಸಲಾಗಿದೆ. ಇದರಲ್ಲಿ ಅನುಮಾನಾಸ್ಪದ ವ್ಯಕ್ತಿಯ ಬೆರಳಚ್ಚು ಪರಿಶೀಲಿಸಿದರೆ ಆತನ ವಿರುದ್ಧದ ಯಾವುದಾದರೂ ಕ್ರಿಮಿನಲ್‌ ಪ್ರಕರಣದ ವಿವರ ಪೊಲೀಸ್‌ ಇಲಾಖೆ ದತ್ತಾಂಶದಲ್ಲಿ ನಮೂದಾಗಿದ್ದರೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರೆ ಬಂಧಿಸಬಹುದು ಎಂದು ಅಧಿಕಾರಿ ಹೇಳಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement