ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದ ರೈತರಿಗೆ ಇನ್ಮುಂದೆ ಮುಕ್ತವಾಗಿ ಮಾರಾಟ ಮಾಡಲು ಅವಕಾಶ

ಬೆಂಗಳೂರು: ಇನ್ಮುಂದೆ ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ (Sandalwood) ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ರೈತರು ತಮ್ಮ ಹೊಲ ಗದ್ದೆಗಳಲ್ಲಿ ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವುದರ ಜೊತೆಗೆ ಮಾರಾಟಕ್ಕೆ ಸರಳ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ರಾಜ್ಯ ಅರಣ್ಯ ಇಲಾಖೆ ಪ್ರಸ್ತಾಪಿಸಿದ ‘ಶ್ರೀಗಂಧ ನೀತಿ- 2022 ’ ಜಾರಿಮಾಡಲು ರಾಜ್ಯ ಸಚಿ ಸಂಪುಟ ಅನುಮೋದನೆ ನೀಡಿದೆ.
2001ರಿಂದ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಶ್ರೀಗಂಧ ಬೆಳೆಯಲು ಅನುಮತಿ ನೀಡಲಾಗಿತ್ತು. ಆದರೆ ಅವುಗಳ ಪೋಷಣೆ, ಸಂರಕ್ಷಣೆ, ಕಟಾವು ಮಾಡುವುದು ಮತ್ತು ಸೂಕ್ತ ಮಾರುಕಟ್ಟೆ ಸೌಲಭ್ಯಗಳನ್ನು ಅರಣ್ಯ ಇಲಾಖೆ ಕಲ್ಪಿಸಿರಲಿಲ್ಲ. ಜೊತೆಗೆ ಶ್ರೀಗಂಧ ಮಾರಾಟ ಮಾಡಲು ಹಲವು ನಿರ್ಬಂಧಗಳಿದ್ದವು. ಹೀಗಾಗಿ ಶ್ರೀಗಂಧ ಮಾರಾಟ ಮಾಡಲು ಪರದಾಡಬೇಕಿತ್ತು. ಸರ್ಕಾರದ ಈ ನಿರ್ಧಾರ ಶ್ರೀಗಂಧ ಬೆಳೆಯುವ ರೈತರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಸರ್ಕಾರ ಮಾರಾಟಕ್ಕೂ ಅನುಮತಿ ನೀಡಿದೆ.

ಸಂಪುಟಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ, ನಮಗೆ ಶ್ರೀಗಂಧದ ಕೊರತೆಯಿದೆ. ನಮ್ಮ ಸರ್ಕಾರಿ ಸಂಸ್ಥೆಗೂ ಮತ್ತು ಖಾಸಗಿ ಸಂಸ್ಥೆಗೂ ಶ್ರೀಗಂಧ ಅಗತ್ಯವಿದೆ. ಈ ಹಿಂದೆ ಮಾರಾಟಕ್ಕೆ ಕೆಲವು ನಿರ್ಬಂಧವಿತ್ತು. ಈಗ ಆ ನಿರ್ಬಂಧಗಳನ್ನು ತೆಗೆದು ಹೊಸ ಶ್ರೀಗಂಧ ನೀತಿ 2022 ಜಾರಿ ಮಾಡಲು ಸಂಪುಟ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ನೂತನ ನೀತಿಯಡಿ ಶ್ರೀಗಂಧ ಬೆಳೆಯಲು ಸೂಕ್ತ ಮಾರ್ಗದರ್ಶನ, ಬೆಳೆಯಲು ಹಾಗೂ ರಕ್ಷಣೆಗೆ ತಂತ್ರಜ್ಞಾನದ ನೆರವು ಹಾಗೂ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
10 ವರ್ಷ ಬೆಳೆದ ಶ್ರೀಗಂಧಕ್ಕೆ ಸೂಕ್ತ ಬೆಲೆ ಲಭ್ಯವಾಗದೆ ರೈತರಿಗೆ ಸಮಸ್ಯೆಯಾಗಿತ್ತು. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಶ್ರೀಗಂಧ ನೀತಿ ಜಾರಿ ತರಲು ಅರಣ್ಯ ಇಲಾಖೆ ಕರಡು ನೀತಿ ಸಿದ್ಧಪಡಿಸಿ ಅನುಮತಿ ಪಡೆಯಲು ಸರ್ಕಾರಕ್ಕೆ ಸಲ್ಲಿಸಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement