ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಶಾಸಕರ ಖರೀದಿ ಯತ್ನದ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ ಮತ್ತು ವಕೀಲ ಶ್ರೀನಿವಾಸ ಅವರನ್ನು ಮುಂದಿನ ಆದೇಶದವರೆಗೆ ಬಂಧಿಸದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ತೆಲಂಗಾಣ ಹೈಕೋರ್ಟ್ ಶನಿವಾರ ಮಧ್ಯಂತರ ಆದೇಶ ನೀಡಿದೆ.
ಆದರೂ ತನಿಖೆಗೆ ಸಹಕರಿಸುವಂತೆ ಇಬ್ಬರಿಗೂ ಸೂಚಿಸಲಾಗಿದೆ. ಬಿಎಲ್ ಸಂತೋಷ ಅವರಿಗೆ ನೋಟಿಸ್ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಎಸ್ಐಟಿಗೆ ಸಹಕರಿಸುವಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಟಿಆರ್ಎಸ್ ಶಾಸಕರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ ಮತ್ತು ವಕೀಲ ಶ್ರೀನಿವಾಸ ಅವರಿಗೆ ಎಸ್ಐಟಿ ನೀಡಿದ್ದ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 41ಎ ನೊಟೀಸ್ಗಳನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿಜಯಸೇನ ರೆಡ್ಡಿ ಅವರ ಪೀಠವು ಮಧ್ಯಂತರ ಆದೇಶ ನೀಡಿದೆ.
ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸಂತೋಷ ಅವರಿಗೆ ನೋಟಿಸ್ ನೀಡಿದ್ದು,. ನವೆಂಬರ್ 21ರಂದು ವಿಚಾರಣೆಗೆ ಹಾಜರಾಗಬೇಕು, ಇಲ್ಲವೇ ಬಂಧನ ಎದುರಿಸಬೇಕಾಗುತ್ತದೆ ಎಂದು ಎಸ್ಐಟಿ ನವೆಂಬರ್ 16ರಂದು ನೀಡಿದ ಸಮನ್ಸ್ನಲ್ಲಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಂತೋಷ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ತೆಲಂಗಾಣ ವಿಶೇಷ ತನಿಖಾ ತಂಡ (ಎಸ್ಐಟಿ) ಟಿಆರ್ಎಸ್ ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಕುರಿತು ತನಿಖೆ ನಡೆಸುತ್ತಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ ಅವರಿಗೆ ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿ ತನಿಖೆಯ ಸಮಯದಲ್ಲಿ, ಪ್ರಸ್ತುತ ತನಿಖೆಗೆ ಸಂಬಂಧಿಸಿದಂತೆ ನಿಮ್ಮಿಂದ ಕೆಲವು ಸಂಗತಿಗಳು ಮತ್ತು ಸಂದರ್ಭಗಳಿಗೆ ನಿಮ್ಮನ್ನು ಪ್ರಶ್ನಿಸಲು ಸಮಂಜಸವಾದ ಆಧಾರಗಳಿವೆ ಎಂದು ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿ ನೋಟಿಸ್ನಲ್ಲಿ ತಿಳಿಸಿದ್ದಾರೆ.ಎಸ್ಐಟಿಯ ಪೂರ್ವಾನುಮತಿಯಿಲ್ಲದೆ ಸಂತೋಷ ವಿದೇಶ ಪ್ರಯಾಣಕ್ಕೂ ನಿರ್ಬಂಧ ಹೇರಲಾಗಿದೆ.
ಟಿಆರ್ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ, ನಾಲ್ವರು ಶಾಸಕರು, ರಾಮಚಂದ್ರ ಭಾರತಿ ಅಕಾ ಸತೀಶ್ ಶರ್ಮಾ, ನಂದಕುಮಾರ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರ ವಿರುದ್ಧ ಅಕ್ಟೋಬರ್ 26ರಂದು ದೂರು ದಾಖಲಿಸಿದ್ದಾರೆ.
ಎಫ್ಐಆರ್ ಪ್ರತಿಯ ಪ್ರಕಾರ, ಆರೋಪಿಗಳು ತನಗೆ 100 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ರೋಹಿತ್ ರೆಡ್ಡಿ ಆರೋಪಿಸಿದ್ದಾರೆ ಮತ್ತು ಅದಕ್ಕೆ ಪ್ರತಿಯಾಗಿ ಶಾಸಕರು ಟಿಆರ್ಎಸ್ ತೊರೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬುದಾಗಿ ಹೇಳಲಾಗಿತ್ತು.
ತೆಲಂಗಾಣ ಸರ್ಕಾರ ನವೆಂಬರ್ 9 ರಂದು ಖರೀದಿ ಯತ್ನದ ಆರೋಪದ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ಎಸ್ಐಟಿಯನ್ನು ಸ್ಥಾಪಿಸಲು ಆದೇಶಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ